ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ

| Published : Mar 14 2024, 02:03 AM IST

ಸಾರಾಂಶ

ವಿರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಬಳಿಯ ಬೀಚ್ ಲ್ಯಾಂಡ್ ಕಾಫಿ ತೋಟವೊಂದರಲ್ಲಿ ಬುಧವಾರ ಕಾಡಾನೆ ದಾಳಿ ನಡೆದಿದ್ದು, ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಜಬಾನು (37) ಆನೆ ದಾಳಿಯಿಂದ ಮೃತಪಟ್ಟರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಜಬಾನು (37) ಆನೆ ದಾಳಿಯಿಂದ ಮೃತಪಟ್ಟವರು.

ಅಬ್ಬೂರು ಬಳಿಯ ಬೀಚ್ ಲ್ಯಾಂಡ್ ಕಾಫಿ ತೋಟವೊಂದರಲ್ಲಿ ಘಟನೆ ನಡೆದಿದ್ದು, ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಪಾಲಿಬೆಟ್ಟ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.ಪಾಲಿಬೆಟ್ಟ ಆಸ್ಪತ್ರೆ ಮುಂಭಾಗ ಸ್ಥಳೀಯರು ಜಮಾಯಿಸಿ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ವಿಫಲ ಎಂದು ಅಸಮಾಧಾನ ವ್ಯಕ್ತಪಡಿಸಿ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾರ್ಮಿಕರು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳ ಭೇಟಿ ನೀಡಿದರು.

ಒಂಟಿ ಸಲಗ ಸಂಚಾರ:

ಕಾಜೂರು ಮೀಸಲು ಅರಣ್ಯದ ಬಳಿ ಮಡಿಕೇರಿ ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಒಂಟಿಸಲಗ ಬೆಳ್ಳಂಬೆಳಗ್ಗೆಯೇ ಸಂಚರಿಸುತ್ತಿದ್ದು, ಜನಸಾಮಾನ್ಯರು ಭಯಭೀತರಾಗಿದ್ದಾರೆ.

ಈ ಭಾಗದಲ್ಲಿ ಟ್ರಂಚ್, ಸೋಲಾರ್ ತಂತಿ ಹಾಗೂ ರೇಲ್ವೇ ಬ್ಯಾರಿಕ್ಯಾಡ್ ಅಳವಡಿಸಲಾಗಿದೆ. ಆದರೂ ರಸ್ತೆಯಲ್ಲಿ ಆನೆ ಸಂಚಾರ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರದ ಯೋಜನೆಗಳು ಯಾವುದೂ ಸರಿಯಾಗಿ ಅನುಷ್ಠಾನವಾಗದೆ, ಕೋಟ್ಯಾಂತರ ಹಣವೆಲ್ಲಾ ನೀರು ಪಾಲಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

ಕಾಡನೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಾಡಿನಲ್ಲಿ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆಯಾಗದ ಹೊರತು ಕಾಡಾನೆಗಳ ನಿಯಂತ್ರಣ ಸಾಧ್ಯವಿಲ್ಲ ಎಂದು ಯಡವಾರೆ ಗ್ರಾಮದ ಕೃಷಿಕ ಅಶೋಕ್ ದೂರಿದರು.