ದಾಬಸ್‍ಪೇಟೆ: ಕೂಲಿ ಕಾರ್ಮಿಕರಿಗೆ ಕಾರ್ಖಾನೆಯ ಮ್ಯಾನೇಜರ್ ಚಾಕು ಇರಿದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟರೆ ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತ್ಯಾಮಗೊಂಡ್ಲು ಹೋಬಳಿಯ ಗೋವೇನಹಳ್ಳಿ ಗ್ರಾಮದ ಖ್ರುಷಿ ಆರ್ ಎಂಸಿ ಸಿಮೇಂಟ್ ಕಾಂಕ್ರೀಟ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಬಲ್ಯಾ ಜಿಲ್ಲೆ ನಿವಾಸಿಗಳಾದ ವಿಕ್ಕಿಕುಮಾರ್(29) ಮೃತಪಟ್ಟವರು. ಓಂಪ್ರಕಾಶ್ ರಾವ್ (23) ಗಂಭೀರ ಗಾಯಗೊಂಡವರು. ಕಾರ್ಖಾನೆಯ ಮ್ಯಾನೇಜ್ ಗಿರೀಶ್ ಕೊಲೆ ಆರೋಪಿ.

ಘಟನಾ ವಿವರ: ಮಾ.4ರಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ಮಿಕರೆಲ್ಲಾ ಕೆಲಸಕ್ಕೆ ರಜೆ ಹಾಕಿ ಕಾರ್ಖಾನೆಯಲ್ಲಿ ಡಿಜೆ ಹಾಡಿಗೆ ಬಣ್ಣಗಳೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದರು. ಬಣ್ಣದೋಕುಳಿ ಆಡುವಾಗ ಸಣ್ಣಪುಟ್ಟ ಮನಸ್ತಾಪ ಶುರುವಾಗಿದೆ.

ನಂತರ ರಾತ್ರಿ ಹಬ್ಬಕ್ಕೆ ಮಾಡಿದ್ದ ಅಡುಗೆ ತರುವಾಗ ಕಾರ್ಮಿಕ ಓಂ ಪ್ರಕಾಶ್ ಬಣ್ಣದ ಕೈ, ಕಾರ್ಖಾನೆಯ ಪ್ಲ್ಯಾಂಟ್ ಆಪರೇಟಿಂಗ್ ಮ್ಯಾನೇಜರ್ ಗಿರೀಶ್ ಗೆ ತಗುಲಿ ಪ್ಯಾಂಟ್ ಬಣ್ಣವಾಗಿದೆ. ಈ ಸಂಬಂಧ ಓಂಪ್ರಕಾಶ್ ಹಾಗೂ ಗಿರೀಶ್ ನಡುವೆ ಜಗಳವಾಗಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಗಿರೀಶ್ ಓಂಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನು ಕಂಡು ಸ್ಥಳಕ್ಕೆ ಬಂದ ಕಾರ್ಮಿಕ ವಿಕ್ಕಿಕುಮಾರ್, ಗಿರೀಶ್ ಗೆ ಹಲ್ಲೆ ಮಾಡಬೇಡ ಅವನು ಏನು ತಪ್ಪು ಮಾಡಿದ್ದಾನೆಂದು ಪ್ರಶ್ನಿಸಿದ್ದಾನೆ. ಈತನ ಮಾತಿಗೆ ಉದ್ರೇಕಗೊಂಡ ಮ್ಯಾನೇಜರ್ ಗಿರೀಶ್, ವಿಕ್ಕಿಕುಮಾರ್ ಗೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದಿದ್ದಾನೆ. ಇದನ್ನು ತಡೆಯಲು ಬಂದ ಓಂಪ್ರಕಾಶ್ ಮೇಲೂ ಹಲ್ಲೆ ಮಾಡಿದ್ದಾನೆ.


ಚಾಕು ಇರಿತದ ರಭಸಕ್ಕೆ ವಿಕ್ಕಿಕುಮಾರ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಓಂ ಪ್ರಕಾಶ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಹತ್ಯೆಯಾಗಿರುವ ವಿಕ್ಕಿಕುಮಾರ್ ವಾರದ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ವಿಷಯ ತಿಳಿಯುತ್ತಿದ್ದಂತೆ ಕಾರ್ಖಾನೆ ಮಾಲೀಕರು ಆಸ್ಪತ್ರೆಗೆ ರವಾನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೊಲೆ ಆರೋಪಿ ಗಿರೀಶ್ ತ್ಯಾಮಗೊಂಡ್ಲು ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಡಿವೈಎಸ್ ಪಿ ಜಗದೀಶ್, ಇನ್ಸ್ ಪೆಕ್ಟರ್ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಟೋ 9 : ಮೃತಪಟ್ಟ ವಿಕ್ಕಿಕುಮಾರ್

ಪೋಟೋ 10 : ಗಾಯಗೊಂಡಿರುವ ಓಂಪ್ರಕಾಶ್

ಪೋಟೋ 11 : ಕೊಲೆ ಮಾಡಿದ ಆರೋಪಿ ಗಿರೀಶ್

ಪೋಟೋ 12 : ಘಟನೆ ನಡೆದ ಸ್ಥಳ