ಕೋರಂ ಅಭಾವ: ನಡೆಯದ ರಾಣಿಬೆನ್ನೂರು ನಗರಸಭೆ ಸಾಮಾನ್ಯ ಸಭೆ

| Published : Oct 19 2025, 01:01 AM IST / Updated: Oct 19 2025, 01:02 AM IST

ಸಾರಾಂಶ

ಕೋರಂ ಅಭಾವದಿಂದ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ರಾಣಿಬೆನ್ನೂರು: ಕೋರಂ ಅಭಾವದಿಂದ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಬೆಳಗ್ಗೆ 11ಕ್ಕೆ ಸಭೆ ನಿಗದಿಪಡಿಸಲಾಗಿದ್ದರೂ ಸದಸ್ಯರ ಬರುವಿಕೆಯ ನಿರೀಕ್ಷೆಯಲ್ಲಿ 11.30ಕ್ಕೆ ಸಭೆಯನ್ನು ಪ್ರಾರಂಭಿಸಲಾಯಿತು. ಆಗ ಆಡಳಿತ ಕಾಂಗ್ರೆಸ್ 9 ಸದಸ್ಯರ ಪೈಕಿ 8 ಸದಸ್ಯರು (ಅಧ್ಯಕ್ಷೆ ಸೇರಿದಂತೆ) ಹಾಗೂ 4 ನಾಮಕರಣ ಸದಸ್ಯರು ಹಾಜರಿದ್ದರು. ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಕೋರಂ ಭರ್ತಿಗೆ 13 ಸದಸ್ಯರ ಹಾಜರಾತಿ ಅಗತ್ಯವಿತ್ತು. ಆದರೆ ಸಭೆಯಲ್ಲಿ ಕೇವಲ 8 ಸದಸ್ಯರು ಮಾತ್ರ ಹಾಜರಿದ್ದರು. (ನಾಮಕರಣ ಸದಸ್ಯರನ್ನು ಕೋರಂಗೆ ಪರಿಗಣಿಸುವುದಿಲ್ಲ). 11.50ರ ವರೆಗೂ ಕಾಯ್ದರೂ ಕೋರಂ ಭರ್ತಿಯಾಗದ ಕಾರಣ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಸಭೆಯನ್ನು ಒಂದು ಗಂಟೆ ಮುಂದೂಡಿದರು. ಕೊನೆಗೂ ನಡೆಯದ ಸಭೆ: ಕೋರಂ ಅಭಾವದ ಕಾರಣ ಮುಂದೂಡಲಾಗಿದ್ದ ಸಭೆಯನ್ನು ಎರಡನೇ ಬಾರಿಗೆ ಮಧ್ಯಾಹ್ನ 1.20ಕ್ಕೆ ಪ್ರಾರಂಭಿಸಲಾಯಿತು. ಆಗಲೂ ಕೂಡ ಕೋರಂ ಭರ್ತಿಯಾಗಲಿಲ್ಲ. ವಿಪರ್ಯಾಸವೆಂದರೆ ಬೆಳಗಿನ ಅವಧಿಯಲ್ಲಿ ಹಾಜರಿದ್ದ ಆಡಳಿತ ಪಕ್ಷದ ಸದಸ್ಯೆ ಜಯಶ್ರೀ ಪಿಸೆ ಈ ಬಾರಿ ಗೈರಾಗಿದ್ದರು. ಇದಲ್ಲದೆ ಕಾಂಗ್ರೆಸ್ ಮತ್ತೊಬ್ಬ ಸದಸ್ಯೆ ನೀಲಮ್ಮ ಮಾಕನೂರ ಮೊದಲಿನ ಹಾಗೂ ಮುಂದೂಡಿದ ಸಭೆಗೆ ಆಗಮಿಸಲಿಲ್ಲ. ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ 27 ಚುನಾಯಿತ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಅನಿವಾರ್ಯವಾಗಿ ಅಧ್ಯಕ್ಷರು ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸಭೆ ಮುಂದೂಡಿಕೆಯಾದ ನಂತರ ಆಡಳಿತ ಪಕ್ಷದ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಸಭೆಯಲ್ಲಿ ನಗರದ ಅಭಿವೃದ್ಧಿ ಹಾಗೂ ಕೆಲವು ಪ್ರಮುಖ ವೃತ್ತಗಳಿಗೆ ಮಹಾನ್ ನಾಯಕರುಗಳ ಹೆಸರಿಡುವ ಕುರಿತು ನಿರ್ಣಯ ಕೈಗೊಳ್ಳುವ ಕುರಿತು ಅಜೆಂಡಾ ರೂಪಿಸಲಾಗಿತ್ತು. ಆದರೆ ನಮಗೆ ಇದುವರೆಗೂ ಸಹಕಾರ ನೀಡಿದ್ದ ಬಿಜೆಪಿ ಸದಸ್ಯರು ಇಂದಿನ ಸಭೆಗೆ ಗೈರು ಹಾಜರಾಗಿದ್ದು ಅದಕ್ಕೆ ಅವಕಾಶವಿಲ್ಲದಂತಾಗಿದೆ. ಇದನ್ನು ಗಮನಿಸಿದರೆ ಬಿಜೆಪಿ ಸದಸ್ಯರಿಗೆ ನಗರದ ಅಭಿವೃದ್ಧಿಗೆ ಇಷ್ಟವಿಲ್ಲದಂತೆ ಕಾಣುತ್ತದೆ ಎಂದರು. ಆಡಳಿತ ಮಂಡಳಿ ಅವಧಿ ಅ. 31ರಂದು ಅಂತ್ಯ:

ನಗರಸಭೆ ಆಡಳಿತ ಮಂಡಳಿಯ ಅವಧಿ ಅ.31ರಂದು ಕೊನೆಗೊಳ್ಳಲಿದ್ದು ಇಂದಿನ ಸಭೆಯ ಬಗ್ಗೆ ಭಾರಿ ನಿರೀಕ್ಷೆಯಿತ್ತು. ಆದರೆ ಇಂದಿನ ಸಭೆ ನಡೆಯದ ಕಾರಣ ಮುಂದಿನ ದಿನಗಳಲ್ಲಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ನಗರದ ಅಭಿವೃದ್ಧಿ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ.