ಮಲೆನಾಡಿನಲ್ಲಿ ಮಳೆ ಕೊರತೆ, ಬೆಳುವಲದಲ್ಲಿ ಹೆಚ್ಚು ಮಳೆ

| Published : Jun 13 2025, 02:20 AM IST

ಮಲೆನಾಡಿನಲ್ಲಿ ಮಳೆ ಕೊರತೆ, ಬೆಳುವಲದಲ್ಲಿ ಹೆಚ್ಚು ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ವಿವಿಧೆಡೆ ಅತೀ ಹೆಚ್ಚು ಮಳೆಯಾದ ಕಾರಣ ಜಿಲ್ಲಾಧಿಕಾರಿಗಳು ಗುರುವಾರ ಜಿಲ್ಲೆಯ ಅಂಗನವಾಡಿ, ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರು. ಗುರುವಾರವೂ ಜಿಲ್ಲೆಯ ವಿವಿಧೆಡೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಕ್ರಮಗಳು ಹಾಗೂ ಮಳೆ ಹಾನಿ ತಡೆಯವ ಮತ್ತು ಪರಿಹಾರ ಕಾರ್ಯಕ್ಕಾಗಿ ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚನೆ ಸಹ ನೀಡಿದ್ದಾರೆ.

ಧಾರವಾಡ: ಹವಾಮಾನ ಇಲಾಖೆಯ ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಅತ್ಯಧಿಕ ಮಳೆಯಾಗಿದ್ದು, ಅಂಕಿ-ಅಂಶಗಳ ಪ್ರಕಾರ ಜೂನ್‌ 11ರ ಬೆಳಗ್ಗೆ 8.30 ರಿಂದ ಜೂನ್‌ 12ರ ಗುರುವಾರ ಬೆಳಗ್ಗೆ 8.30ರ ವರೆಗೆ ಬರೋಬ್ಬರಿ 40.9 ಮಿ.ಮೀ. ಮಳೆಯಾಗಿರುವ ವರದಿಯಾಗಿದೆ.

ಈ 24 ಗಂಟೆಗಳಲ್ಲಿ ವಾಡಿಕೆ ಮಳೆ ಬರೀ 4.7 ಮಿ.ಮೀ. ಮಾತ್ರ. ಆದರೆ, ಆಗಿದ್ದು ಬರೋಬ್ಬರಿ 40.9 ಮಿ.ಮೀ. ಅಂದರೆ ಶೇ. 770ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಪೈಕಿ ಅತೀ ಹೆಚ್ಚು ಹುಬ್ಬಳ್ಳಿ ತಾಲೂಕಿನಲ್ಲಿ 71.5 ಮೀ.ಮೀ, ಕುಂದಗೋಳ 63, ಅಣ್ಣಿಗೇರಿ 56.9, ನವಲಗುಂದ 56.7, ಹುಬ್ಬಳ್ಳಿ ನಗರ 30.4, ಧಾರವಾಡ 19, ಕಲಘಟಗಿ 9.2 ಹಾಗೂ ಅಳ್ನಾವರ ಬರೀ 4.8 ಮೀ.ಮೀ ಮಳೆಯಾಗಿದೆ.

ಮಲೆನಾಡಿನಲ್ಲಿ ಕೊರತೆ: ಸಾಮಾನ್ಯವಾಗಿ ಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆ. ಆದರೆ, ಈ ಬಾರಿ ಬೆಳವಲು ಪ್ರದೇಶದಲ್ಲಿಯೇ ಹೆಚ್ಚು ಮಳೆಯಾಗಿದ್ದು, ಮಲೆನಾಡಿನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಕಳೆದ ಜೂನ್‌ 1 ರಿಂದ 12ರ ವರೆಗೆ ಜಿಲ್ಲೆಯ ಅಳ್ನಾವರದಲ್ಲಿ ವಾಡಿಕೆ 66.6 ಮೀ.ಮೀ. ಮಳೆಯಾಗಬೇಕಿತ್ತು. ಆದರೆ, 33.7ರಷ್ಟು ಮಾತ್ರ. ಹಾಗೆಯೇ, ಕಲಘಟಗಿಯಲ್ಲಿ 54.5 ಮಿ.ಮೀ. ವಾಡಿಕೆ ಮಳೆ ಪೈಕಿ ಆಗಿದ್ದು 18.8 ಮಿ.ಮೀ. ಆದರೆ, ಬೆಳವಲು ಪ್ರದೇಶವಾದ ನವಲಗುಂದ, ಕುಂದಗೋಳ, ಅಣ್ಣಿಗೇರಿಯಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

ಗುರುವಾರವೂ ಮಳೆ: ಜಿಲ್ಲೆಯ ವಿವಿಧೆಡೆ ಅತೀ ಹೆಚ್ಚು ಮಳೆಯಾದ ಕಾರಣ ಜಿಲ್ಲಾಧಿಕಾರಿಗಳು ಗುರುವಾರ ಜಿಲ್ಲೆಯ ಅಂಗನವಾಡಿ, ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರು. ಗುರುವಾರವೂ ಜಿಲ್ಲೆಯ ವಿವಿಧೆಡೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಕ್ರಮಗಳು ಹಾಗೂ ಮಳೆ ಹಾನಿ ತಡೆಯವ ಮತ್ತು ಪರಿಹಾರ ಕಾರ್ಯಕ್ಕಾಗಿ ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚನೆ ಸಹ ನೀಡಿದ್ದಾರೆ.