ಕನ್ನಡಪ್ರಭ ವಾರ್ತೆ ಪಾಂಡವಪುರ
ಪೂರ್ವಿಕರು ನಿರ್ಮಿಸಿದ್ದ ಕೆರೆ ಕಟ್ಟೆಗಳು, ವೈಜ್ಞಾನಿಕವಾಗಿದ್ದವು. ಅವುಗಳಿಗೆ ನೈರ್ಗಿಕವಾಗಿ ನೀರು ಸರಾಗವಾಗಿ ಹರಿದುಬರುತ್ತಿತ್ತು. ಇಂದು ನೀರಿನ ಮೂಲಗಳನ್ನೆ ಮುಚ್ಚಿದ್ದರಿಂದ ನೈಸರ್ಗಿಕವಾಗಿ ನೀರಿನ ಹರಿವು ಇಲ್ಲದೆ ಕೆರೆ ಕಟ್ಟೆಗಳು ಬತ್ತಿವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸುಮಾರು 5 ಕೋಟಿ ರು. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಮೂಲಕ ಗ್ರಾಪಂ ವ್ಯಾಪ್ತಿಯ ವಿವಿಧ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಸೇರಿದಂತೆ ಒಟ್ಟು 8.5 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಏತ ನೀರಾವರಿ ಯೋಜನೆಯಲ್ಲಿ ಕೆಲವು ಕೆರೆ ಕಟ್ಟೆಗಳು ಬಿಟ್ಟು ಹೋಗಿದ್ದವು. ಅಂತಹವುಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈ ಹಿಂದೆ ನಮ್ಮ ಪೂರ್ವಿಕರು ನಿರ್ಮಿಸಿದ್ದ ಕೆರೆ ಕಟ್ಟೆಗಳು ವೈಜ್ಞಾನಿಕವಾಗಿದ್ದವು. ಅವುಗಳಿಗೆ ನಾವು ಕೃತಕವಾಗಿ ನೀರು ತುಂಬಿಸಬೇಕಿರಲಿಲ್ಲ. ನೈಸರ್ಗಿಕವಾಗಿ ಮಳೆ ಬಂದಾಗ ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿದ್ದವು. ಇಂದು ಸಾಕಷ್ಟು ರೈತರು ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡು ಜಲ ಮೂಲಗಳನ್ನು ಮುಚ್ಚಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕೆರೆ ಕಟ್ಟೆಗಳು ನಿಮ್ಮದಾಗಿದ್ದು ಇದನ್ನು ನೀವೇ ಉಳಿಸಿಕೊಳ್ಳಬೇಕು. ಮುಚ್ಚಿರುವ ಜಲ ಮೂಲಗಳನ್ನು ತೆಗೆದು ಕೆರೆಗಳಿಗೆ ನೀರು ಸರಾಗವಾಗಿ ಹರಿದುಬರುವಂತೆ ಮಾಡಬೇಕು ಎಂದರು.
ಇಂದು ಭೂಮಿಪೂಜೆ ನಡೆದಿರುವ ಏತ ನೀರಾವರಿ ಯೋಜನೆ ಕಾಮಗಾರಿಯಿಂದ ಕುರಹಟ್ಟಿ, ಅತ್ತಿಗಾನಹಳ್ಳಿ, ಮೇನಾಗರ, ಮೂಡಲಕೊಪ್ಪಲು, ಸುಂಕಾತೊಣ್ಣುರು, ಚಿಕ್ಕನಹಳ್ಳಿ, ನರಹಳ್ಳಿ, ಬೋಳೇನಹಳ್ಳಿ ಗ್ರಾಮದ ಕೆರೆಗಳು ತುಂಬಲಿವೆ ಎಂದರು.
ಅಲ್ಲದೇ, 65 ಲಕ್ಷ ರು. ವೆಚ್ಚದಲ್ಲಿ ಸುಂಕಾತೊಣ್ಣೂರು ಗ್ರಾಮದ ಅಂಬರೀಶ್ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, 30 ಲಕ್ಷ ರು. ವೆಚ್ಚದಲ್ಲಿ ಇದೇ ಗ್ರಾಮದ ರಸ್ತೆ ಅಭಿವೃದ್ಧಿ, ಅತ್ತಿಗಾನಹಳ್ಳಿಯಲ್ಲಿ 20 ಲಕ್ಷ ರು., ಎಸ್.ಕೊಡಗಳ್ಳಿಯ 10 ಲಕ್ಷ ರು., ಕಾಳೇನಹಳ್ಳಿಯಲ್ಲಿ 36 ಲಕ್ಷ ರು., ಈರೇಗೌಡನಕೊಪ್ಪಲು ಗ್ರಾಮದಲ್ಲಿ 20 ಲಕ್ಷ ರು., ಮತ್ತು ಮಾಡರಹಳ್ಳಿಯಲ್ಲಿ 1.5 ಕೋಟಿ ರು. ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ತಾಲೂಕು ರೈತಸಂಘದ ಅಧ್ಯಕ್ಷವೈ.ಪಿ.ಮಂಜುನಾಥ್, ಎಂಜಿನಿಯರ್ ರೂಪಾ, ಸುಂಕಾತೊಣ್ಣುರು ಗ್ರಾಮದ ಮುಖಂಡರಾದ ಎಸ್.ಡಿ.ನಟರಾಜು, ಎಸ್.ಆರ್.ಜ್ಞಾನೇಶ್, ಎಸ್.ಡಿ.ಕುಮಾರ್, ವಿಶ್ವ, ಶ್ರೀನಿವಾಸ್, ಎಸ್.ವಿ.ಹೇಮಾದ್ರಿ, ಚಂದ್ರಶೇಖರ್, ಅತ್ತಿಗಾನಹಳ್ಳಿ ನಾಗರಾಜು, ಸಿದ್ದೇಗೌಡ, ಜಗದೀಶ್, ಬಸವರಾಜು, ಮಹೇಶ್, ಎಸ್.ಕೊಡಗಳ್ಳಿ ಕುಮಾರ್, ರಾಮೇಗೌಡ, ಶಿವಲಿಂಗೇಗೌಡ, ಸ್ವಾಮೀಗೌಡ, ಕಾಳೇನಹಳ್ಳಿ ಆನಂದ್, ಪುಟ್ಟಸ್ವಾಮಿಗೌಡ, ಪಂಚಲಿಂಗೇಗೌಡ, ಪುಟ್ಟರಾಜು, ಸುರೇಶ್ ಸೇರಿದಂತೆ ಇತರರು ಇದ್ದರು.