ಸಾರಾಂಶ
ಗದಗ: ಜಗತ್ತಿನ ಸಾಂಸ್ಕೃತಿಕ ಸಂಪತ್ತಿಗೆ ಲಕ್ಕುಂಡಿ ಗ್ರಾಮದ ಕೊಡುಗೆ ಅಪಾರವಾಗಿದ್ದು, ಅದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತ ಕಾರ್ಯ ಮಾಡಲು ಸಚಿವನಾಗಿ ನನಗೆ ಅವಕಾಶ ಸಿಕ್ಕಿರುವದು ಸಂತಸದ ಸಂಗತಿಯಾಗಿದೆ ಎಂದು ಪ್ರವಾಸೋದ್ಯಮ, ಕಾನೂನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಅವರು ಭಾನುವಾರ ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 13 ಅರಕ್ಷಿತ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಲಕ್ಕುಂಡಿಗೆ ಹೋದವ ಹಂಪಿಗೆ ಹೋಗುತ್ತಾನೆ. ಹಂಪಿಗೆ ಹೋದವ ಲಕ್ಕುಂಡಿಗೆ ಬಂದೇ ಬರ್ತಾನೆ ಎನ್ನುವಂತಾಗಬೇಕು. ಕಟ್ಟೆಯ ಕೆಳಗೆ ಅವಿತಿರುವ ಕಲೆ, ಶಿಲ್ಪಕಲೆಗಳು ಅದ್ಭುತ ಕಲಾಕೃತಿಗಳನ್ನು ಉತ್ಖನನವಾಗಬೇಕಾದರೆ ಗ್ರಾಮಸ್ಥರ ಪ್ರೀತಿ, ಸ್ನೇಹ, ವಿಶ್ವಾಸ, ತ್ಯಾಗ ಬೇಕಾಗುತ್ತದೆ. ಕಲ್ಯಾಣ ಚಾಲುಕ್ಯ ಕಾಲದಲ್ಲಿ ಅದ್ಭುತ ಶಿಲ್ಪಕಲೆಗಳನ್ನು ಅಗೌರವದಿಂದ ನೋಡಲಾಗುತ್ತಿದೆ. ಇಂದಿಗೂ ತಿಪ್ಪೆಗಳನ್ನು ಅಗೆದರೂ 20ಕ್ಕೂ ಹೆಚ್ಚು ಶಿಲ್ಪಕಲೆಗಳು ಸಿಗುತ್ತವೆ. ಕಟ್ಟೆ ಅಗೆದರೂ ಮ್ಯೂಸಿಯಂ ಹಿಡಿಸಲಾಗದಷ್ಟು ಪಾರಂಪರಿಕ ಶಿಲ್ಪಕಲೆಗಳು ದೊರೆಯುತ್ತವೆ. ಆದ್ದರಿಂದ ಗ್ರಾಮಸ್ಥರು, ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು ಎಂದರು.ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಲಕ್ಕುಂಡಿಯನ್ನು ಚಾಲುಕ್ಯರು ಠಂಕ ಶಾಲೆಯನ್ನಾಗಿಸಿಕೊಂಡಿದ್ದರು. ಆ ಕಾಲದ ಇತಿಹಾಸ ಸಂಸ್ಕೃತಿ, ವೈಭವದ ಮೆರಗು, ಸಂಭ್ರಮ ಮರುಕಳಿಸುವಂತೆ ಆಂದೋಲನ ಪ್ರಾರಂಭಿಸಬೇಕು. ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳು ಇವೆ, ಅವೆಲ್ಲವನ್ನು ಸರ್ಕಾರದಿಂದ ಅಭಿವೃದ್ಧಿಗೊಳಿಸುವುದರ ಜತೆಗೆ ಊರಿನ ಮತ್ತು ಸ್ಮಾರಕಗಳ ಬಗ್ಗೆ ಅಭಿಮಾನ ಹೊಂದಿ ಅಮೇರಿಕದಲ್ಲಿರುವ ಕನ್ನಡಿಗರು ಮುಂದೆ ಬಂದು ದತ್ತು ತೆಗೆದುಕೊಳ್ಳುತ್ತಿರುವುದು ಗರ್ವ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದರು.
ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಕುಂಡಿಗೆ ತನ್ನದೇ ಆದ ಐತಿಹಾಸಿಕ ಸ್ಥಾನವಿದೆ. ಪಾರಂಪರಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿರುವ ಲಕ್ಕುಂಡಿಯಲ್ಲಿ 101 ದೇವಾಲಯ, 101 ಬಾವಿಗಳಿವೆ ಎಂಬುದು ಇತಿಹಾಸದಿಂದ ತಿಳಿದು ಬಂದರೂ ಸದ್ಯ 30 ದೇವಾಲಯಗಳು, 30 ಬಾವಿಗಳು ಮಾತ್ರ ಕಂಡುಬರುತ್ತಿವೆ. ಅವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಅವಶ್ಯಕ. ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ₹43 ಕೋಟಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗಿದೆ. ಸಚಿವ ಎಚ್.ಕೆ. ಪಾಟೀಲ ₹5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆರಂಭಿಕವಾಗಿ ಚಾಲನೆ ನೀಡಿರುವುದು ಸಂತಸದ ವಿಷಯವಾಗಿದೆ. ಲಕ್ಕುಂಡಿ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಹಾಲಗೊಂಡ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ ಅನುದಾನ ಒದಗಿಸುವುದು ಸೇರಿ ಪ್ರಸಕ್ತ ಸಾಲಿನ ಲಕ್ಕುಂಡಿ ಉತ್ಸವಕ್ಕೂ ಚಾಲನೆ ನೀಡಬೇಕು ಎಂದು ಸಿ.ಸಿ.ಪಾಟೀಲ ಸಚಿವರಿಗೆ ಮನವಿ ಮಾಡಿದರು.ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಲಕ್ಕುಂಡಿ ಪರಂಪರೆ ಗುರುತಿಸಿ ಹೆಚ್ಚಿನ ಪ್ರಾತಿನಿಧ್ಯ ನೀಡಿ ಪಾರಂಪರಿಕ ಸ್ಮಾರಕ ರಕ್ಷಿಸಿಕೊಂಡು ಬರಲಾಗುತ್ತಿದೆ ಎಂದ ಅವರು, 8 ದೇವಸ್ಥಾನಗಳ ಉತಾರಗಳನ್ನು ಗ್ರಾಪ ಅಧ್ಯಕ್ಷ ಕೆಂಚಪ್ಪ ಪೂಜಾರ ಸಚಿವ ಎಚ್.ಕೆ.ಪಾಟೀಲ ಅವರಿಗೆ ಹಸ್ತಾಂತರಿಸಿದರು.
ವಿಪ ಸದಸ್ಯ ಎಸ್.ವಿ.ಸಂಕನೂರ ಮುಂತಾದವರು ಮಾತನಾಡಿದರು.ಲಕ್ಕುಂಡಿ ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ಅ.ದ. ಕಟ್ಟಿಮನಿ, ವಿವೇಕ ಯಾವಗಲ್, ಅಶೋಕ ಮಂದಾಲಿ ಪಾಲ್ಗೊಂಡಿದ್ದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು.ಕಾಮಗಾರಿಗಳಿಗೆ ಶಿಲಾನ್ಯಾಸ: ₹5 ಕೋಟಿ ವೆಚ್ಚದಲ್ಲಿ 13 ಅರಕ್ಷಿತ ಸ್ಮಾರಕಗಳಾದ ಹಾಲಗುಂಡಿ ಬಸವೇಶ್ವರ ದೇವಾಲಯ, ಮಜ್ಜನ ಬಾವಿ, ಈಶ್ವರ ದೇವಾಲಯ, ಕಲ್ಮಠ ದೇವಾಲಯ, ಕಲ್ಮಠ ಬಾವಿ, ಕಣ್ಣರ ಬಾವಿ, ಕೋಟೆ ವೀರಭದ್ರೇಶ್ವರ ದೇವಾಲಯ, ಲಕ್ಷ್ಮಿನಾರಾಯಣ ದೇವಾಲಯ, ಲೆಕ್ಕದ ವೀರಣ್ಣ ದೇವಾಲಯ, ಈಶ್ವರ ಗುಡಿ ಹತ್ತಿರದ ಮಾಳಿ ಬಾವಿ, ಮಲ್ಲಿಕಾರ್ಜುನ ದೇವಾಲಯ, ನೀಲಕಂಠೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಕಪ್ಪಲಿ ಬಾವಿ, ವಿರುಪಾಕ್ಷ ದೇವಾಲಯ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
₹5 ಕೋಟಿ ವೆಚ್ಚದಲ್ಲಿ 13 ಅರಕ್ಷಿತ ಸ್ಮಾರಕಗಳಾದ ಹಾಲಗುಂಡಿ ಬಸವೇಶ್ವರ ದೇವಾಲಯ, ಮಜ್ಜನ ಬಾವಿ, ಈಶ್ವರ ದೇವಾಲಯ, ಕಲ್ಮಠ ದೇವಾಲಯ, ಕಲ್ಮಠ ಬಾವಿ, ಕಣ್ಣರ ಬಾವಿ, ಕೋಟೆ ವೀರಭದ್ರೇಶ್ವರ ದೇವಾಲಯ, ಲಕ್ಷ್ಮಿನಾರಾಯಣ ದೇವಾಲಯ, ಲೆಕ್ಕದ ವೀರಣ್ಣ ದೇವಾಲಯ, ಈಶ್ವರ ಗುಡಿ ಹತ್ತಿರದ ಮಾಳಿ ಬಾವಿ, ಮಲ್ಲಿಕಾರ್ಜುನ ದೇವಾಲಯ, ನೀಲಕಂಠೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಕಪ್ಪಲಿ ಬಾವಿ, ವಿರುಪಾಕ್ಷ ದೇವಾಲಯ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.