ಸಾರಾಂಶ
ರಾಮ ಭಕ್ತರನ್ನ ಮಂತ್ರಮುಗ್ಧಗೊಳಿಸಿದ ದೀಪೋತ್ಸವ. ಕಾರ್ಯಕ್ರಮವನ್ನು ಜೈ ಭಾರತ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥ ಮುತ್ಯಾ ಮಹಾರಾಜರು ಉದ್ಘಾಟನೆ ಮಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಸುರಭಿ ಎನ್ಜಿಒ ವೆಲ್ಫೇರ್ ಅಸೋಸಿಯೇಶನ್ ಹಾಗೂ ಸಂಸ್ಕಾರ ಇಂಟರ್ನ್ಯಾಶನಲ್ ಶಾಲೆ ವತಿಯಿಂದ ಶಾಲೆಯ ದಶಮಾನೋತ್ಸವ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಶಾಲಾ ಆವರಣದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಜೈ ಭಾರತ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥ ಮಹಾರಾಜರು ಉದ್ಘಾಟಿಸಿದರು. ಭಾಲ್ಕಿಯ ಕಥಾ ವಾಚಕರಾದ ಕೃಷ್ಣ ರಾಮಾಯಣಿ ಮಹಾರಾಜರು ರಾಮಾಯಣದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸಂಬಂಧಿಸಿದ ಆಯುಧ ರಾಮಾಯಣ ಚೌಪಾಯಿ ಕುರಿತು ಬೋಧಿಸಿದರು.
ಇದೇ ವೇಳೆ ಸಂಸ್ಥೆಯ ನಿರ್ದೇಶಕಿ ಕು. ಕ್ಷಿತಿಜಾ ಎರೋಳಕರ್ ಮಾತನಾಡಿ, ಆಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ನಮ್ಮ ಸಂಸ್ಥೆಯ ದಶಮಾನೋತ್ಸವ ಒಂದೆ ದಿನ ಕೂಡಿ ಬಂದಿದ್ದು, ಇದೊಂದು ಅಮೃತ ಘಳಿಗೆಯಾಗಿದೆ. ಈ ಲಕ್ಷದೀಪೋತ್ಸವವು ಎಲ್ಲರ ಬಾಳಿನಲ್ಲಿ ಬೆಳಕು ಮೂಡಿಸಲಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಚಿವ ಭಗವಂತ ಖೂಬಾ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ನಿರ್ದೇಶಕ ಬಸವರಾಜ ಕಾಮಶೆಟ್ಟಿ, ಡಾ. ರಜನೀಶ ವಾಲಿ, ಡಾ. ಚಂದ್ರಕಾಂತ, ಡಾ. ಸಿ.ಆನಂದರಾವ್, ಪ್ರಕಾಶ ಟೊಣ್ಣೆ, ಸಂಸ್ಥೆಯ ಅಧ್ಯಕ್ಷ ಡಾ. ಅಮರ ಎರೋಳಕರ್, ವ್ಯವಸ್ಥಾಪಕ ನಿರ್ದೇಶಕರಾದ ಅನುಪಮಾ ಎರೋಳಕರ್, ನಿರ್ದೇಶಕಿ ಸರೋಜಾ ಅರಳಿ, ಪತ್ರಕರ್ತ ಸತೀಶ ಪಾಟೀಲ್ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಬಿದರಿ ಸಾಂಸ್ಕೃತಿಕ ವೇದಿಕೆಯ ಗಾಯಕಿ ರೇಖಾ ಸೌದಿಯವರ ಶ್ರೀರಾಮ ಮೇಲಿನ ಹಾಡುಗಳ ಗಾಯನ ಸಭಿಕರ ಮನ ಸೆಳೆಯಿತು. ಕಲಾವಿದರಾದ ಪೂರ್ಣಚಂದ್ರ, ವಿಶಾಲ, ನಂದಿನಿ ಹಾಗೂ ತಂಡದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಲ್ಲೆಡೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು. ಶಾಲೆಯ ಶಿಕ್ಷಕಿ ಲಕ್ಷ್ಮಿ ಗಾದಗಿ ನಿರೂಪಿಸಿ, ಸುಜಾತಾ ಆರ್., ಸ್ವಾಗತಿಸಿದರೆ ಶ್ವೇತಾ ವಂದಿಸಿದರು.