ಸಾರಾಂಶ
ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ 8 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಓರ್ವ ರೈತಸಂಘದ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ 8 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಓರ್ವ ರೈತಸಂಘದ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದರು.ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿತ ಎಲ್.ಟಿ.ವಿಶ್ವನಾಥ್, ಹುಚ್ಚೇಗೌಡ, ಎಲ್.ಆರ್.ಉದಯಕುಮಾರ್, ಎಲ್.ಕೆ.ಸತೀಶ್, ಎಲ್.ಎ.ಅಶೋಕ್ (ಸಾಮಾನ್ಯ), ಜಯಲಕ್ಷ್ಮಮ್ಮ (ಮಹಿಳಾ ಮೀಸಲು), ಎಲ್.ಸಿ.ಕುಮಾರ (ಬಿಸಿಎಂಬಿ), ರೈತಸಂಘದ ಬೆಂಬಲಿತ ಅನ್ನಪೂರ್ಣ (ಮಹಿಳಾ ಮೀಸಲು) ಚುನಾಯಿತರಾದರು.
ಉಳಿದಂತೆ ಎನ್.ದೀಪು (ಎಸ್.ಸಿ ಮೀಸಲು) ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಆರ್.ನಿರ್ಮಲಾ ಪ್ರಕಟಿಸಿದರು.ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್ ಮಾತನಾಡಿ, ಲಕ್ಷ್ಮೀಸಾಗರ ಗ್ರಾಮವು ಶಾಂತಿಪ್ರಿಯ ಗ್ರಾಮ. ಸಂಘಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಡೇರಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟಿದ್ದಾರೆ ಎಂದರು.
ತಾಪಂ ಮಾಜಿ ಸದಸ್ಯ ಎಲ್.ಎಸ್.ರಾಜು ಮಾತನಾಡಿ, ಡೇರಿ ಚುನಾವಣೆಯಲ್ಲಿ ಗ್ರಾಮಸ್ಥರ ಸಹಕಾರದಿಂದ ಜೆಡಿಎಸ್ ಗೆ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ಈ ವೇಳೆ ನೂತನ ನಿರ್ದೇಶಕರನ್ನು ಜೆಡಿಎಸ್ ಮುಖಂಡರಾದ ಎಲ್.ಎಸ್.ರಾಜು, ಜೈಕೃಷ್ಣ, ಎಲ್.ಡಿ.ಸಂಜಯ್, ಎಲ್.ಕೆ.ಮರಿ ಚಲುವೇಗೌಡ, ಜಗದೀಶ್, ಸೋಬಾನೆ ರಾಜೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷಎಲ್.ಸಿ.ಮಂಜುನಾಥ್, ರಘು ಇತರರು ಅಭಿನಂದಿಸಿದರು.
ಇದಕ್ಕೂ ಮೊದಲು ಬೆಳಗ್ಗೆಯಿಂದ ಬಿರುಸಿನಿಂದ ಮತದಾನ ನಡೆಯಿತು. ಮತದಾರರ ಓಲೈಕೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ನಿರತರಾಗಿದ್ದರು. ಮತದಾನ ಮುಗಿದ ಬಳಿಕ ಸಂಜೆ ಏಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಯಿತು. ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.