- 670 ಕುಟುಂಬಗಳು ಸ್ಥಳಾಂತರಕ್ಕೆ ಅರ್ಜಿ
- 356 ಕುಟುಂಬಗಳಿಗೆ ₹142 ಕೋಟಿ ಪರಿಹಾರ- ಬಾಕಿ ಉಳಿದ 314 ಕುಟುಂಬಗಳಿಗೆ ₹300 ಕೋಟಿಯಲ್ಲಿ ಪುರ್ನವಸತಿಗೆ ಸರ್ಕಾರ ಸಿದ್ಧ
ಕನ್ನಡಪ್ರಭ ವಾರ್ತೆ, ವಿಧಾನಪರಿಷತ್ತುಕುದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಿರುವ ಕುಟುಂಬಗಳ ಪೈಕಿ ಪಟ್ಟಾ ಜಮೀನು ಹೊಂದಿರುವವರಿಗೆ ಮಾತ್ರ ಭೂ ಪರಿಹಾರ ನೀಡಬಹುದು. ಅರಣ್ಯ ಹಕ್ಕು ಕಾಯ್ದೆ ಅನುಸಾರ ಎಲ್ಲರಿಗೂ ಪರಿಹಾರ ನೀಡಲು ಬರುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ವಿಧಾನ ಪರಿಷತ್ನಲ್ಲಿ ಸೋಮವಾರ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ಧಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು, ಕುದುರೆ ಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸವಾಗಿರುವ 1,382 ಕುಟುಂಬಗಳ ಸ್ಥಳಾಂತರಕ್ಕೆ 2005 ರಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ವಾಸವಿದ್ದ ಕುಟುಂಬಗಳ ಪೈಕಿ 670 ಕುಟುಂಬಗಳು ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆಯೇ 356 ಕುಟುಂಬಗಳಿಗೆ ₹142 ಕೋಟಿ ಪರಿಹಾರ ನೀಡಿ ಸ್ಥಳಾಂತರ ಮಾಡಲಾಗಿದೆ. ಪ್ರಸ್ತುತ ಬಾಕಿ ಉಳಿದ 314 ಕುಟುಂಬಗಳಿಗೆ 300 ಕೋಟಿ ವೆಚ್ಚದಲ್ಲಿ ಪುರ್ನವಸತಿ ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ರಾಷ್ಟ್ರೀಯ ಉದ್ಯಾನವನದಿಂದ ಸ್ವ ಇಚ್ಛೆಯಿಂದ ಹೊರಬರುವ ಕುಟುಂಬಗಳು ಮೊದಲು ತಹಸೀಲ್ದಾರರ ನೇತೃತ್ವದ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಸಮಿತಿಯಲ್ಲಿ ಕಂದಾಯ, ಭೂದಾಖಲೆ, ತೋಟಗಾರಿಕೆ, ಅರಣ್ಯ, ಕೃಷಿ, ಲೋಕೋಪಯೋಗಿ ಇಲಾಖೆಗೆ ಸೇರಿದ ಅಧಿಕಾರಿಗಳು ಇದ್ದು, ಪುನರ್ವಸತಿಗೆ ಅರ್ಜಿ ಸಲ್ಲಿಸಿದ ಕುಟುಂಬ ವಾಸವಿದ್ದ ಮನೆ ಹಾಗೂ ಜಮೀನುಗಳ ಮೌಲ್ಯವನ್ನು ನಿರ್ಣಯಿಸಿ, ಜಿಲ್ಲಾಧಿಕಾರಿಗಳ ಸಮಿತಿಗೆ ಸಲ್ಲಿಸುತ್ತಾರೆ. ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಸಮಿತಿ ಪರಿಹಾರವನ್ನು ನಿಗದಿಪಡಿಸಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಇದನ್ನು ಆಧರಿಸಿ ಸರ್ಕಾರ 2025ರ ಲೋಕೋಪಯೋಗಿ ಮತ್ತು ಕಂದಾಯ ಇಲಾಖೆ ಪ್ರಮಾಣಿತ ದರದಲ್ಲಿ ಅನುದಾನದ ಲಭ್ಯತೆ ಆಧಾರದಲ್ಲಿ ಪರಿಹಾರ ವಿತರಿಸಿ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದರು.
ಶಾಂತಾರಾಮ ಸಿದ್ಧಿ ಅವರು ಈ ಕುಟುಂಬಗಳಿಗೆ 2026ರ ಪ್ರಮಾಣಿತ ದರದಲ್ಲಿ ಅನುದಾನ ನೀಡಬೇಕೆಂದು ಕೋರಿದರು. ಜೊತೆಗೆ ಎಲ್ಲ ಅರಣ್ಯ ವಾಸಿಗಳಿಗೂ ಭೂ ಪರಿಹಾರ ನೀಡುವಂತೆ ಕೋರಿದರು. ಇದಕ್ಕೆ ಸಚಿವರು, ಅರಣ್ಯ ಹಕ್ಕು ಕಾಯ್ದೆ ಯಡಿ ಪಟ್ಟಾ ಭೂಮಿ ಹೊಂದಿರುವವರಿಗೆ ಮಾತ್ರ ಭೂ ಪರಿಹಾರ ನೀಡಲು ಸಾಧ್ಯ, ಎಲ್ಲರಿಗೂ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.(ಸಚಿವ ಈಶ್ವರ್ ಖಂಡ್ರೆ ಫೋಟೊ ಬಳಸಿ)
