ಸಾರಾಂಶ
ಗೂಡೇಹೊಸಹಳ್ಳಿ ಗ್ರಾಮದ ಜ್ಯೋತಿ ಎಂಬುವರು ಕಡಹೆಮ್ಮಿಗೆ ಗ್ರಾಮದ ಸರ್ವೇ ೧೪೦ಕ್ಕೆ ಸೇರಿದ ಸುಮಾರು ೧.೫ ಎಕರೆ ಸರ್ಕಾರಿ ಜಮೀನಿನಲ್ಲಿ ಕಳೆದ ೩೦ ವರ್ಷಗಳಿಂದ ಕೃಷಿ ಮಾಡಿ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಸರ್ಕಾರಿ ಜಮೀನಿನ ಮಂಜೂರಾತಿಗೆ ದರಕಾಸು ಸಮಿತಿಯ ಮುಂದೆ ಅರ್ಜಿ ಹಾಕಿ ಸರ್ಕಾರಿ ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುಂಪೊಂದು ವಾಸದ ಶೆಡ್ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ಅಡುಗೆ ಸಾಮಗ್ರಿಗಳು ಮತ್ತು ಪೀಠೋಪಕರಣಗಳನ್ನು ಹೊರಗೆಸೆದು ನಾಶಮಾಡಿ ವಾಸದ ಶೆಡ್ಡನ್ನು ದ್ವಂಸಗೊಳಿಸುವ ಘಟನೆ ತಾಲೂಕಿನ ಕಡಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಗೂಡೇಹೊಸಹಳ್ಳಿ ಗ್ರಾಮದ ಜ್ಯೋತಿ ಎಂಬುವರು ಕಡಹೆಮ್ಮಿಗೆ ಗ್ರಾಮದ ಸರ್ವೇ ೧೪೦ಕ್ಕೆ ಸೇರಿದ ಸುಮಾರು ೧.೫ ಎಕರೆ ಸರ್ಕಾರಿ ಜಮೀನಿನಲ್ಲಿ ಕಳೆದ ೩೦ ವರ್ಷಗಳಿಂದ ಕೃಷಿ ಮಾಡಿ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಸರ್ಕಾರಿ ಜಮೀನಿನ ಮಂಜೂರಾತಿಗೆ ದರಕಾಸು ಸಮಿತಿಯ ಮುಂದೆ ಅರ್ಜಿ ಹಾಕಿ ಸರ್ಕಾರಿ ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಜಮೀನಿನ ಮೇಲೆ ಕಣ್ಣು ಹಾಕಿರುವ ಕೆಲವರು ಗುಂಪುಗೂಡಿ ಜ್ಯೋತಿ ಕುಟುಂಬವನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ವಾಸದ ಶೆಡ್ಡನ್ನು ನಾಶಪಡಿಸಿ ದಾಂಧಲೆ ನಡೆಸಿದ್ದಾರೆಂದು ಹೇಳಲಾಗಿದೆ.
ಘಟನೆ ಸಂಬಂಧ ಜ್ಯೋತಿ ಅವರು ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ರಕ್ಷಣೆಗೆ ಮನವಿ ಮಾಡಿದ್ದಾರೆ. ಜಮೀನಿನಲ್ಲಿ ನಾನು ಹಲವು ದಶಕಗಳಿಂದ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದೇನೆ. ಕಳೆದ ೩ ತಿಂಗಳ ಹಿಂದೆ ಆಕಸ್ನಿಕವಾಗಿ ಶೆಡ್ಡು ಸುಟ್ಟುಹೋಗಿತ್ತು. ಆನಂತರ ಸಿಮೆಂಟ್ ಇಟ್ಟಿಗೆ ಬಳಸಿ ಮೇಲ್ಚಾವಣೆಗೆ ಶೀಟು ಹಾಕಿಕೊಂಡು ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. ಡಿ.೨೯ರಂದು ಬೆಳಗ್ಗೆ ೮.೩೦ರ ಸಮಯದಲ್ಲಿ ಸ್ವಾಮಿ, ಅವರ ಪತ್ನಿ ಮಂಜುಳ, ಶಿವರಾಮು ಮತ್ತು ಅವರ ಪತ್ನಿ ಭಾಗ್ಯ ಹಾಗೂ ಯಜಮಾನ್ ಕುಮಾರ ಮತ್ತು ಅವರ ಪತ್ನಿ ಲತಾ ಅವರು ಗುಂಪುಗೂಡಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಂಧಲೆ ನಡೆಸಿ ನನ್ನ ವಾಸದ ಶೆಡ್ ಮತ್ತು ಮನೆಯೊಳಗಿದ್ದ ಪೀಠೋಪಕರಣಗಳು, ಆಹಾರ ಸಾಮಗ್ರಿಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಹೊರಗೆಸದು ನಾಶಪಡಿಸಿದ್ದಾರೆ. ದಾಂಧಲೆಕೋರರ ವಿರುದ್ಧ ಕ್ರಮ ಜರುಗಿಸಿ ರಕ್ಷಣೆ ನಿಡುವಂತೆ ಜ್ಯೋತಿ ಮತ್ತು ಅವರ ಕುಟುಂಬಸ್ಥರು ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.