Land handed over by donors for Ayushman Health Center

ನರಸಿಂಹರಾಜಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ಕೋಣನಕೆರೆ ಗ್ರಾಮದಲ್ಲಿ ಆರೋಗ್ಯ ಇಲಾಖೆಗೆ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡ ಕಟ್ಟಲು ಸ್ಥಳೀಯ ದಾನಿಗಳಾದ ಕನಕಮ್ಮ ಅವರು ತಮ್ಮ ಅಡಿಕೆ ತೋಟದ 5 ಗುಂಟೆ ಜಾಗವನ್ನು ಆರೋಗ್ಯ ಇಲಾಖೆಗೆ ದಾನವಾಗಿ ನೀಡಿದರು.

5 ಗುಂಟೆ ಜಾಗವನ್ನು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿದ ನಂತರ ದಾನದ ದಾಖಲೆಯನ್ನು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ಅವರಿಗೆ ದಾನಿ ಕನಕಮ್ಮ ಅವರು ಹಸ್ತಾಂತರಿಸಿದರು. ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ಮಾತನಾಡಿ, ನಾವು ಉಳಿಸಿಕೊಳ್ಳುವ ಆಸ್ತಿ ನಮ್ಮ ಕುಟುಂಬಕ್ಕೆ ಮಾತ್ರ ಪ್ರಯೋಜನವಾಗಲಿದೆ. ಆದರೆ, ಸಮಾಜಕ್ಕೆ ನೀಡುವ ಆಸ್ತಿ ಸಾವಿರಾರು ಜನರ ಬದುಕಿಗೆ ಬೆಳಕಾಗಲಿದೆ. ಕೋಣನಕೆರೆಯ ದಾನಿ ಕನಕಮ್ಮ ಅವರು ಆರೋಗ್ಯ ಇಲಾಖೆಗೆ ದಾನವಾಗಿ ನೀಡಿದ ಜಾಗವು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು. ದಾನಿ ಕನಕಮ್ಮ ಅವರ ಕುಟುಂಬವರಾದ ಆಶಾ, ಉಶಾ, ಶೈಲಜಾ, ಶಿವಕುಮಾರ್, ತಾಲೂಕು ಸರ್ಕಾರಿ ಆಸ್ಪತ್ರೆಯ ವ್ಯವಸ್ಥಾಪಕ ಕಿರಣ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ದರ್ಶನ್, ಕೇಶವ ಮೂರ್ತಿ, ಮುತ್ತಿನಕೊಪ್ಪ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್ ಇದ್ದರು.