ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ )ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಗೆ ಪ್ರತಿಯಾಗಿ ಮತ್ತೊಂದು ಗುಂಪಿನ ರೈತರು ಭೂ ಸ್ವಾಧೀನ ಪಡಿಸಿಕೊಂಡು ತ್ವರಿತಗತಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸಿ ಗುರುವಾರದಿಂದ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಬೈರಮಂಗಲ ವೃತ್ತದಲ್ಲಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರು 474 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಇದೀಗ ವೃತ್ತದಿಂದ ಅಣತಿ ದೂರದಲ್ಲಿ ಮತ್ತೊಂದು ರೈತರ ಗುಂಪು ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಶುರು ಮಾಡಿದೆ.ಭೂ ಮಾಲೀಕ ಹೊಸೂರು ರಾಜಣ್ಣ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಟೌನ್ ಶಿಪ್ ಗಾಗಿ ಭೂಮಿಯನ್ನು ಗುರುತಿಸಿ ರೆಡ್ ಜೋನ್ ಮಾಡಿದರು. ಅಲ್ಲಿಂದ ಇಲ್ಲಿವರೆಗೆ ರೈತರು ತೊಂದರೆ ಅನುಭವಿಸುತ್ತಾ ಬಂದಿದ್ದಾರೆ. ನಮಗೆ ಯೋಜನೆಗೆ ಸಂಪೂರ್ಣ ಬೆಂಬಲ ಇದ್ದು, ನಮ್ಮ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ಕೊಡಲಿ ಎಂದು ಒತ್ತಾಯಿಸಿದರು.
ಮತ್ತೊಬ್ಬ ಭೂ ಮಾಲೀಕ ಎಚ್.ಎಸ್.ಸಿದ್ಧರಾಜು ಮಾತನಾಡಿ, ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ. ಆ ಕೆಲಸವನ್ನು ಕುಮಾರಸ್ವಾಮಿರವರು ಟೌನ್ ಶಿಪ್ ವಿಚಾರದಲ್ಲಿ ಮಾಡಲು ಹೊರಟಿದ್ದಾರೆ. ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಲು ಕುಮಾರಸ್ವಾಮಿ ಅವರೇ ಕಾರಣ. ಸರ್ಕಾರ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಿಸದಿದ್ದರೆ ನಾವೂ ಚಳವಳಿಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಭೂ ಮಾಲೀಕರಾದ ಭರತ್ , ಮಂಜುನಾಥ್ , ಕೃಷ್ಣಮೂರ್ತಿ, ಶಿವರಾಮು, ವಿನಯ್ ಕುಮಾರ್ , ಶೇಖರ್ ,ಜಯಚಂದ್ರ, ಜಯರಾಮು ಹೊಸೂರು ಮತ್ತಿತರರು ಭಾಗವಹಿಸಿದ್ದರು.
25ಕೆಆರ್ ಎಂಎನ್ 11.ಜೆಪಿಜಿ
ಬೈರಮಂಗಲದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಣೆ ಮಾಡುವಂತೆ ಆಗ್ರಹಿಸಿ ಭೂ ಮಾಲೀಕರು ಪ್ರತಿಭಟನೆ ನಡೆಸಿದರು.