ಶಿವಮೊಗ್ಗ: ಮನೆ ಮಾಲೀಕ ಮಾಡಿದ ಸಾಲಕ್ಕೆ ಅಮಾಯಕ ಬಾಡಿಗೆದಾರರು ಬೀದಿಗೆ ಬಿದ್ದಿರುವ ಘಟನೆ ನಗರದ ಬೊಮ್ಮನಕಟ್ಟೆ ಸಿ-ಬ್ಲಾಕ್ ಬಡಾವಣೆಯಲ್ಲಿ ನಡೆದಿದೆ.

ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಪೊಲೀಸರ ನೆರವಿನೊಂದಿಗೆ ಭೋಗ್ಯಕ್ಕೆ ಇದ್ದ ಮಹಿಳೆಯ ಮನೆಯ ಸಾಮಗ್ರಿಗಳನ್ನು ತೆರವು ಮಾಡಿದ್ದಾರೆ. ಘಟನೆ ವಿವರ: ಮಮತಾ ಎಂಬ ಮಹಿಳೆ ಕುಮಾರ್ ಎಂಬುವವರ ಮನೆಯನ್ನು 4.50 ಲಕ್ಷ ರು.ಗೆ ಭೋಗ್ಯಕ್ಕೆ ಪಡೆದು ಮಗನೊಂದಿಗೆ ವಾಸವಾಗಿದ್ದರು. ಆದರೆ, ಮಾಲೀಕ ಮನೆಯ ಮೇಲೆ ಖಾಸಗಿ ಫೈನಾನ್ಸ್‌ನಲ್ಲಿ ಭಾರಿ ಸಾಲ ಮಾಡಿದ್ದು, ಕಳೆದ ಮೂರು ತಿಂಗಳ ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಬಂದ ಫೈನಾನ್ಸ್ ಸಿಬ್ಬಂದಿ, ಬಾಡಿಗೆದಾರರ ಸ್ಥಿತಿಯನ್ನು ಲೆಕ್ಕಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಾಲೀಕ ತನಗೆ ಫೈನಾನ್ಸ್‌ನಿಂದ ನೋಟಿಸ್ ಬಂದಿದ್ದರೂ ಆ ವಿಷಯವನ್ನು ಭೋಗ್ಯಕ್ಕೆ ಇದ್ದ ಮಹಿಳೆಗೆ ತಿಳಿಸಿರಲಿಲ್ಲ. ಒಂದು ವೇಳೆ ಮುಂಚಿತವಾಗಿಯೇ ಮಾಹಿತಿ ನೀಡಿ ಹಣ ವಾಪಸ್ ನೀಡಿದ್ದರೆ ಅವರು ಮನೆ ಖಾಲಿ ಮಾಡುತ್ತಿದ್ದರು. ಆದರೆ, ಯಾವುದೂ ತಿಳಿಯದ ಮಮತಾ ಅವರು ಏಕಾಏಕಿ ನಡೆದ ಈ ಘಟನೆಯಿಂದ ಕಂಗಾಲಾಗಿದ್ದಾರೆ.