ಮಡಿಕೇರಿ ತಾಲೂಕು ಕುಂದಚೇರಿ ಗ್ರಾಮದ ವ್ಯಾಪ್ತಿಯಲ್ಲಿ ಬೆಟ್ಟ ಕುಸಿತ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆಕಾರಣವಾಗಿದೆ. ಇದರಿಂದಾಗಿ ಬೆಟ್ಟದ ಕೆಳಗೆ ಭಾಗದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕನ್ನಡಪ್ರಭವಾರ್ತೆ ನಾಪೋಕ್ಲು
ಮಡಿಕೇರಿ ತಾಲೂಕು ಕುಂದಚೇರಿ ಗ್ರಾಮದ ವ್ಯಾಪ್ತಿಯಲ್ಲಿ ಬೆಟ್ಟ ಕುಸಿತ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆಕಾರಣವಾಗಿದೆ. ಇದರಿಂದಾಗಿ ಬೆಟ್ಟದ ಕೆಳಗೆ ಭಾಗದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಕುಂದಚೇರಿ ಗ್ರಾಮದ ಪೂವಲಮಾನಿ ಎಸ್ಇ ಕಾಲೋನಿಯಲ್ಲಿ ಸುಮಾರು 15 ಕುಟುಂಬಗಳು ವಾಸವಾಗಿದ್ದು ಇದರ ಮೇಲ್ಭಾಗದಲ್ಲಿ ಮಣ್ಣು ಹಾಗೂ ಸಣ್ಣ ಪ್ರಮಾಣದ ಕಲ್ಲುಗಳು ಉರುಳಿವೆ. ಈ ವಿಚಾರ ಬೆಟ್ಟದ ಕೆಳಭಾಗದಲ್ಲಿ ಜನವಸತಿಯ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದ ಗ್ರಾಮ ಪಂಚಾಯಿತಿ, ಕಂದಾಯ, ಅರಣ್ಯ ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಪ್ರಸ್ತುತ ಸ್ಥಿತಿಯಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಟ್ಟದ ಕೆಳಭಾಗದಲ್ಲಿ ವಾಸವಾಗಿದ್ದ ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಕಂದಾಯ ಪರಿವೀಕ್ಷಕರಾಗಿರುವ ಶಿವಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಮ ಲೆಕ್ಕಿಗ ಜನಾರ್ದನ, ಎನ್ ಡಿ ಆರ್ ಎಫ್, ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪೂವಲಮಾನಿ ಎಸ್ಇ ಕಾಲೋನಿ ಮೇಲ್ಭಾಗದ ಬೆಟ್ಟದಲ್ಲಿ ಮಣ್ಣು ಹಾಗೂ ಬಂಡೆಕಲ್ಲು ಕುಸಿದಿರುವುದರಿಂದ ಹೆಚ್ಚಿನ ಅಪಾಯವನ್ನು ತಡೆಗಟ್ಟಲು ತಂತಿ ಬೇಲಿ ನಿರ್ಮಿಸಿ ಬಂಡೆಗಳು ಉರುಳದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ತೀವ್ರ ನಿಗವಹಿಸಲಾಗಿದೆ. ತೀರಾ ಅಪಾಯದಲ್ಲಿರುವ ಎರಡು ಮನೆಯ ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.-ಹರೀಶ್ ಕುಂದಚೇರಿ ಗ್ರಾಮ ಅಭಿವೃದ್ಧಿ ಅಧಿಕಾರಿ.