ಸಾರಾಂಶ
ಮದ್ದೂರು ಪಟ್ಟಣದ ಪುರಾಣಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ, ಕೋಟೆ ಬೀದಿಯ ಶ್ರೀಉಗ್ರ ನರಸಿಂಹ ಸ್ವಾಮಿ, ಹಳೇ ಎಂಸಿ ರಸ್ತೆಯ ಆಂಜನೇಯ ಸ್ವಾಮಿ ಹಾಗೂ ತಾಲೂಕಿನ ಕದಲೀಪುರದ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಆಬಲವಾಡಿ ಶ್ರೀತೋಪಿನ ತಿಮ್ಮಪ್ಪ ದೇವಾಲಯಗಳಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಕನ್ನಡಪ್ರಭ ವಾರ್ತೆ ಮದ್ದೂರು
ಕೊನೇ ಶ್ರಾವಣ ಶನಿವಾರದ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶ್ರೀಮನ್ ನಾರಾಯಣ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿದವು.ಪಟ್ಟಣದ ಪುರಾಣಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ, ಕೋಟೆ ಬೀದಿಯ ಶ್ರೀಉಗ್ರ ನರಸಿಂಹ ಸ್ವಾಮಿ, ಹಳೇ ಎಂಸಿ ರಸ್ತೆಯ ಆಂಜನೇಯ ಸ್ವಾಮಿ ಹಾಗೂ ತಾಲೂಕಿನ ಕದಲೀಪುರದ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಆಬಲವಾಡಿ ಶ್ರೀತೋಪಿನ ತಿಮ್ಮಪ್ಪ ದೇವಾಲಯಗಳಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಮುಂಜಾನೆಯಿಂದಲೇ ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು. ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಮುಂಜಾನೆ ಪ್ರಧಾನ ಅರ್ಚಕ ಪ್ರದೀಪಚಾರ್ಯ ಹಾಗೂ ಸಹ ಅರ್ಚಕ ಸುರೇಶ ಆಚಾರ್ಯ ನೇತೃತ್ವದಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂಲ ವಿಗ್ರಹಕ್ಕೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಚಂದನದ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.ನಂತರ ಸೀತಾರಾಮ, ಲಕ್ಷ್ಮಣ ಹಾಗೂ ಹನುಮನ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ನಡೆಸಲಾಯಿತು. ಕೋಟೆ ಬೀದಿಯ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣದ ಶನಿವಾರದ ಮೂಲ ವಿಗ್ರಹಕ್ಕೆ ಅಭಿಷೇಕದ ನಂತರ ಬೆಣ್ಣೆ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ತಾಲೂಕಿನ ಆತಗೂರು ಹೋಬಳಿ ಕದಲೀಪುರ ಗ್ರಾಮದ ಶ್ರೀ ಕದಲೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಮುಂಜಾನೆ ಅಷ್ಟೋತ್ತರ, 108 ಕಳಸಾಭಿಷೇಕದ ಬಳಿಕ ಪುಷ್ಪಾಲಂಕಾರ ದೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಶ್ರೀ ಕದಲೀ ಲಕ್ಷ್ಮಿ ವೆಂಕಟೇಶ್ವರ ದೇಗುಲದ ಟ್ರಸ್ಟ್ ಅಧ್ಯಕ್ಷ ಸುಶೀಲಾ ಮತ್ತು ಕೆ.ಟಿ.ಶಿವರಾಮ್ ಮತ್ತು ಅರ್ಚಕ ನಾರಾಯಣ ಅಯ್ಯಂಗಾರ್ ನೇತೃತ್ವದಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ವಿತರಣೆ ಮಾಡಲಾಯಿತು.