ಆರೋಗ್ಯಯುಕ್ತ ಬದುಕಿಗೆ ನಗೆ ದಿವ್ಯೌಷಧ: ಅರುಣ ಕುಲಕರ್ಣಿ

| Published : Apr 08 2024, 01:00 AM IST

ಆರೋಗ್ಯಯುಕ್ತ ಬದುಕಿಗೆ ನಗೆ ದಿವ್ಯೌಷಧ: ಅರುಣ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ಯುಗಾದಿ ಅಂಗವಾಗಿ ಹಾಸ್ಯ-ಲಾಸ್ಯ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಗದಗ

ಆಸೆಗಳು ಅಪರಿಮಿತವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗಿ ಮನಸ್ಸಿನ ನೆಮ್ಮದಿ ಕಳೆದುಕೊಂಡಿದ್ದು, ಸಂತೆಯಲ್ಲೂ ಒಂಟಿತನ ಕಾಡುವ ಈ ದಿನಮಾನದಲ್ಲಿ ಎಲ್ಲ ಇದ್ದೂ ಇಲ್ಲದಂತಾಗಿದೆ ಎಂದು ನರೇಗಲ್ಲನ ನಗೆ ಭಾಷಣಕಾರ ಅರುಣ ಕುಲಕರ್ಣಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ಯುಗಾದಿ ಅಂಗವಾಗಿ ಜರುಗಿದ ಹಾಸ್ಯ-ಲಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಸ್ಪರ ಮಾತುಕತೆ, ಚರ್ಚೆ, ಹಾಸ್ಯದ ಮೂಲಕ ಮನಸ್ಸನ್ನು ಹಗುರವಾಗಿಸಬಹದು. ನಗೆ ಮುಖದ ನರನಾಡಿಗಳನ್ನು ಉದ್ದೀಪನಗೊಳಿಸುವುದರ ಜೊತೆಗೆ ಮನಸ್ಸನ್ನು ಉಲ್ಲಸಿತ ಸ್ಥಿತಿಯಲ್ಲಿಡುತ್ತದೆ. ಆರೋಗ್ಯದ ಬದುಕಿಗೆ ನಗೆ ದಿವ್ಯ ಔಷಧಿಯಾಗಿದೆ. ಬದುಕಿನ ಅನೇಕ ಸಂದರ್ಭಗಳಲ್ಲಿ ಹಾಸ್ಯ ಸಹಜವಾಗಿ ಹಾಸುಹೊಕ್ಕಾಗಿದೆ. ಅದನ್ನು ಪೂರ್ಣ ಮನಸ್ಸಿನಿಂದ ಆಸ್ವಾದಿಸುವ ಗುಣವನ್ನು ಹೊಂದುವ ಅಗತ್ಯವಿದೆ ಎಂದ ಅವರು ಅನೇಕ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಬೀಚಿ ಅವರು ತಮ್ಮ ಹಾಸ್ಯ ಸಾಹಿತ್ಯದ ಮೂಲಕ ಕನ್ನಡಕ್ಕೆ ಹೊಸತನ ತಂದಿದ್ದಾರೆ. ಮನುಷ್ಯ ನಗುವನ್ನು ಮರೆತಿರುವುದರಿಂದಲೇ ನಗೆ ಕ್ಲಬ್‌ಗಳು ಹುಟ್ಟಿಕೊಂಡಿವೆ. ನಗುವಿನಲ್ಲಿ ಮೈಮರೆಯುವ ಸಂದರ್ಭ ಒಂದು ಯೋಗ ಮತ್ತು ಧ್ಯಾನವಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ನಿಮಿತ್ತ ಶಂಕ್ರಣ್ಣ ಸಂಕಣ್ಣವರ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆಗೆ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪಡೆದ ನಿಮಿತ್ತ ವಿ.ವಿ. ಹಿರೇಮಠ ಅವರನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ನಿವೃತ್ತ ಅಧ್ಯಾಪಕರು ಹಾಗೂ ಚಿಂತಕರಾದ ಎನ್.ಎಚ್. ಹಿರೇಸಕ್ಕರಗೌಡರ ಉಪಸ್ಥಿತರಿದ್ದರು.

ಶ್ರೀಕಾಂತ ಬಡ್ಡೂರ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು. ಪ್ರೊ. ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಸಿ.ಎಂ. ಮಾರನಬಸರಿ, ಎಸ್.ಎಂ. ಕಾತರಕಿ, ರತ್ನಕ್ಕ ಪಾಟೀಲ, ಪ್ರ. ತೋ. ನಾರಾಯಣಪುರ, ಮಂಜುಳಾ ವೆಂಕಟೇಶಯ್ಯ, ಶಿವಾನಂದ ಭಜಂತ್ರಿ, ಶಶಿಕಾಂತ ಕೊರ್ಲಹಳ್ಳಿ, ಬಿ.ಎಫ್. ಚೇಗರಡ್ಡಿ, ಶೇಕಣ್ಣ ಕಳಸಾಪೂರಶೆಟ್ಟರ, ಕೆ.ಪಿ. ಗುಳಗೌಡರ, ಅನಂತ ಮೋಹನಭಟ್, ಜಯದೇವಭಟ್, ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಮಹೇಶ ಶಟವಾಜಿ, ಷಡಕ್ಷರಿ ಮೆಣಸಿನಕಾಯಿ, ರಾಜಶೇಖರಗೌಡ ಪಾಟೀಲ, ಜೆ. ಎ. ಪಾಟೀಲ, ಡಾ. ರಾಜಶೇಖರ ದಾನರಡ್ಡಿ, ಅಶೋಕ ಸತರಡ್ಡಿ ಮೊದಲಾದವರು ಉಪಸ್ಥಿತರಿದ್ದರು.