ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಾನವ ಜೀವಿಸಲು ಗಾಳಿ, ಆಹಾರ ಮತ್ತು ನೀರಿನಂತೆ ಕಾನೂನು ಪಾಲನೆ ಕೂಡಾ ಅವಶ್ಯಕ ಎಂದು ಬಾಗಲಕೋಟೆ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಬನಹಟ್ಟಿ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್.ಸಿ.ಪಿ.ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ.. ಎಂದು ಕಾನೂನು ಪಾಲನೆ ಬಗ್ಗೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳಿದ್ದಾರೆ. ವಿವೇಕಾನಂದರು ತಾವು ಯುವಕರಾಗಿದ್ದಾಗಲೇ ತಮ್ಮ ಸ್ಫೂರ್ತಿದಾಯಕ ನಡೆನುಡಿಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಯುವಕರಿಂದ ಬದಲಾವಣೆ ಸಾಧ್ಯ. ಎಲ್ಲರೂ ಕಾನೂನು ಪಾಲಿಸಬೇಕು. ನಾವು ಕಾನೂನು ಪಾಲಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ವಾಹನ ಖರೀದಿ ನಂತರ ನೋಂದಣಿ ಮಾಡಿಸಬೇಕು, ವಿಮೆ ಮಾಡಸಬೇಕು. ಚಲಾಯಿಸಲು ಲೈಸನ್ಸ್ ಹೊಂದಿರಬೇಕು. ಅಂದಾಗ ಮಾತ್ರ ಅಪಘಾತವಾದಾಗ ಇನ್ಶೂರನ್ಸ್ ಸಂಸ್ಥೆಯವರು ಪರಿಹಾರ ನೀಡುತ್ತಾರೆ. ಸಾಮಾಜಿಕ ಪಿಡುಗುಗಳಾದ ಡ್ರಗ್ಸ್, ಗುಟ್ಕಾ, ಧೂಮಪಾನದಿಂದ ದೂರ ಇರಬೇಕು. ಆಮಿಷಗಳಿಗೆ ಒಳಗಾಗಬಾರದು. ಮಾನವ ಕಳ್ಳ ಸಾಗಣೆ ಬಗ್ಗೆ ಎಚ್ಚರದಿಂದಿರಬೇಕು. ಮಾನವ ಭ್ರೂಣಾವಸ್ಥೆಯಲ್ಲಿದ್ದಾಗಲೇ ಬದುಕುವ ಹಕ್ಕು ಪಡೆಯುತ್ತಾನೆ. ಗರ್ಭದಿಂದ ಗೋರಿಗೆ ಹೋಗುವವರೆಗೂ ಕಾನೂನು ಅನ್ವಯವಾಗುತ್ತದೆ. ಸತ್ತ ನಂತರ ಕೂಡಾ ಮರಣ ದಿನಾಂಕ ನೋಂದಾಯಿಸಬೇಕಾಗುತ್ತದೆ ಎಂದು ಹೇಳದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಹನಟ್ಟಿ ದಿವಾಣಿ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯೆ ಶುಷ್ಮಾ ಟಿ.ಸಿ. ಮಾತನಾಡಿ, ದ್ವಿಚಕ್ರ ಸವಾರೆಲ್ಲೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಅದು ನಿಮ್ಮಿಂದಲೇ ಪ್ರಾರಂಭವಾಗಲಿ. ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಕಾನೂನು ಪಾಲನೆ ಮಾಡಬೇಕು, ಅಗತ್ಯ ಕಾಗದ ಪತ್ರಗಳನ್ನು ನಿಮ್ಮ ಸಂಗಡ ಇಟ್ಟುಕೊಂಡು ವಾಹನ ಚಲಾಯಿಸಬೇಕು. ಬಾಲ್ಯ ವಿವಾಹ ಅಪರಾಧವಾಗಿದ್ದು, ಅದನ್ನು ತಡೆಯಲು ಪ್ರಯತ್ನಿಸಬೇಕು. ಅದಕ್ಕೆ ಸಹಕರಿಸಿದವರೂ ಕೂಡಾ ತಪ್ಪಿತಸ್ಥರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಭವ್ಯಾ ಆರ್., ಪಿಎಸ್ಐ ಪ್ರವೀಣ ಬೀಳಗಿ, ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ ಮಾತನಾಡಿದರು.ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಐಕ್ಯೂಎಸಿ ಸಂಯೋಜಕಿ ಡಾ.ಸುನಂದಾ ಸೋರಗಾಂವಿ ವೇದಿಕೆ ಮೇಲಿದ್ದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಂಚಾಲಕ ಎಸ್.ಎಸ್. ಮುಗಳ್ಯಾಳ, ಎಸ್.ಎಸ್. ಕೊಡಗನೂರ, ಸಿ.ಎಂ.ಗೆಣ್ಣೂರ, ಆರ್.ಎಸ್. ಪೂಜಾರಿ, ಎ.ಎಂ. ಉಗಾರೆ, ಎಸ್.ಎಲ್. ಮೂಡಲಗಿ ವಕೀಲರಾದ ಮಂಜುನಾಥ ಅಗಸಿಮನಿ, ವಿರುಪಾಕ್ಷಿ ಟಿರಕಿ, ಕಾಡಪ್ಪ ಫಕಿರಪುರ, ಮಹಾದೇವ ಗಾಯಕವಾಡ, ಬಸವರಾಜ ಕೊಕಟನೂರ, ಸುರೇಶ ಮಡಿವಾಳರ ಇದ್ದರು.
ಕಾವ್ಯ ಮಾಳಿ ಪ್ರಾರ್ಥಿಸಿದರು. ಎ.ಜಿ.ಯಾದವಾಡ ಮಾಲಾರ್ಪಣೆ ಮಾಡಿದರು. ವಿ.ಎ. ಅಡಹಳ್ಳಿ ವಂದಿಸಿದರು.