ಸಾರಾಂಶ
ಕಳೆದ ೩೩ ವರ್ಷಗಳಿಂದಲೂ ಈಜು ಕೊಳದಲ್ಲಿ ತರಬೇತುದಾರನಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ. ನಮ್ಮ ಅವಧಿಯಲ್ಲಿ ಅನೇಕರು ಈಜು ಕಲಿತಿದ್ದಾರೆ. ಅನೇಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ.
ಕನ್ನಡಪ್ರಭ ವಾರ್ತೆ ಹಾಸನ
ಕಳೆದ 33 ವರ್ಷಗಳಿಂದ ಮಹಾರಾಜ ಉದ್ಯಾನವನದಲ್ಲಿರುವ ಈಜುಕೊಳದಲ್ಲಿ ಈಜು ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮೀಕಾಂತ್ ಸೇವಾವಧಿ ಮುಗಿದಿದ್ದು, ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದ ನಗರಸಭೆ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು ಲಕ್ಷ್ಮೀಕಾಂತ್ ಅವರ ಸೇವೆಯನ್ನು ಗುಣಗಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.ನಗರದ ಮಹಾರಾಜ ಪಾರ್ಕಿನಲ್ಲಿ ಈಜು ಕೊಳದ ಆವರಣದಲ್ಲಿ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ ಭಾವಹಿಸಿ ಮಾತನಾಡಿ, ಲಕ್ಷ್ಮೀಕಾಂತ್ ಅವರು ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ನಮ್ಮ ನಗರಸಭೆ ಸಿಬ್ಬಂದಿಯಾಗಿ, ನಗರದ ಮಹಾರಾಜ ಪಾರ್ಕಿನಲ್ಲಿ ಈಜು ತರಬೇತಿ ನೀಡಿ ಇಂದು ನಿವೃತ್ತಿಯಾಗುತ್ತಿದ್ದಾರೆ. ನಿವೃತ್ತಿಯ ನಂತರವೂ ಕೂಡ ಅವರ ಸೇವೆಯನ್ನು ನಗರಸಭೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಜಿಪಂ ನಿವೃತ್ತ ಸಿಇಒ ಬಿ.ಎ. ಪರಮೇಶ್ ಮಾತನಾಡಿ, ಲಕ್ಷ್ಮೀಕಾಂತ್ ಒಬ್ಬ ಸರಳ, ಸಜ್ಜನ ವ್ಯಕ್ತಿಯಾಗಿದ್ದು, ನಗರಸಭೆ ಸಿಬ್ಬಂದಿಯಾಗಿದ್ದುಕೊಂಡು ನಗರದ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರತಿ ಮಕ್ಕಳಿಗೂ ಉತ್ತಮ ರೀತಿಯಲ್ಲಿ ಈಜು ತರಬೇತಿ ನೀಡುವ ಮೂಲಕ ಅವರಿಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕರಾಗಿದ್ದಾರೆ. ಇಂತಹವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಿಜಕ್ಕೂ ನಮಗೆಲ್ಲರಿಗೂ ಸಂತೋಷ ತಂದಿದೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು. ಹಿರಿಯ ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, ಲಕ್ಷ್ಮೀಕಾಂತ್ ಅವರು ನಗರದ ಎಲ್ಲ ವರ್ಗದವರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಈಜು ತರಬೇತಿಗೆ ಬಂದಂತಹ ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವುದಲ್ಲದೆ ಅವರಿಗೆ ಉತ್ತಮ ತರಬೇತಿಯನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಒಬ್ಬ ಅತ್ಯುತ್ತಮ ತರಬೇತಿದಾರ ಎಂದರೆ ಅದು ಲಕ್ಷ್ಮೀಕಾಂತ. ಇವರಿಂದ ತರಬೇತಿ ಪಡೆದಂತಹ ಅದೆಷ್ಟೋ ಮಕ್ಕಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಗೌರವ ತಂದಿದ್ದಾರೆ. ಇಂತಹ ವ್ಯಕ್ತಿ ನಿವೃತ್ತಿ ಒಂದು ಕಡೆ ಬೇಸರ ತರಿಸುತ್ತದೆ. ಏಕೆಂದರೆ ಇಂತಹ ಅತ್ಯುತ್ತಮ ತರಬೇತುದಾರ ನಮಗೆ ಸಿಗುವುದು ಕಷ್ಟಕರ. ಅವರ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಎಂದು ಹೇಳಿದರು. ನಿವೃತ್ತಗೊಂಡ ಈಜು ತರಬೇತುದಾರ ಲಕ್ಷ್ಮೀಕಾಂತ್ ಮಾತನಾಡಿ, ಕಳೆದ ೩೩ ವರ್ಷಗಳಿಂದಲೂ ಈಜು ಕೊಳದಲ್ಲಿ ತರಬೇತುದಾರನಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ. ನಮ್ಮ ಅವಧಿಯಲ್ಲಿ ಅನೇಕರು ಈಜು ಕಲಿತಿದ್ದಾರೆ. ಅನೇಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕ್ರೀಡಾ ತರಬೇತುದಾರ ನಿರಂಜನ್, ನಗರ ಸಭೆಯ ಇಂಜಿನಿಯರ್ಗಳಾದ ಚೆನ್ನೇಗೌಡ, ಆನಂದ್ ಹಾಗೂ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಆಯುರ್ವೇದ ವೈದ್ಯರಾದ ರಾಮು, ಅರುಣ್ ಸೇರಿದಂತೆ ಇತರರು ಹಾಜರಿದ್ದರು. ನಿವೃತ್ತರಾದ ಲಕ್ಷ್ಮೀಕಾಂತ್ ಅವರ ಪತ್ನಿ, ತಾಯಿ, ಅತ್ತೆ ಇವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.