ಸಾರಾಂಶ
ನೂತನ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಮೊದಲ ಹಂತದಲ್ಲಿ ಸುಮಾರು 1.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಮೂರ್ನಾಡು ಪಟ್ಟಣದ ಶ್ರೀರಾಮಮಂದಿರವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ನೂತನ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.ಮೊದಲ ಹಂತದಲ್ಲಿ ಸುಮಾರು 1.50 ಕೋಟಿ ರು. ವೆಚ್ಚದಲ್ಲಿ ರಾಮಮಂದಿರ ನಿರ್ಮಾಣಗೊಳ್ಳಲಿದೆ. 2ನೇ ಹಂತದಲ್ಲಿ ಸಭಾ ಭವನ ಹಾಗೂ 3ನೇ ಹಂತದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಒಟ್ಟು ಯೋಜನಾ ವೆಚ್ಚ 4 ಕೋಟಿ ರು. ಎಂದು ಶ್ರೀರಾಮಮಂದಿರ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.
ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆ, ತಲಕಾವೇರಿ, ಇರ್ಪುವಿನ ಮೃತ್ತಿಕೆ (ಮಣ್ಣು), ಕಾವೇರಿ, ಗಂಗಾ ಮತ್ತು ಕಾಶಿ ತೀರ್ಥವನ್ನು ಶಿಲಾನ್ಯಾಸದ ಸಂದರ್ಭ ಸಮರ್ಪಿಸಲಾಯಿತು.ಭೂಮಿಪೂಜೆ ಸಂದರ್ಭ ಮೂರ್ನಾಡು ಶ್ರೀರಾಮಮಂದಿರ ಟ್ರಸ್ಟ್, ಶ್ರೀರಾಮಮಂದಿರ ಜೀರ್ಣೋದ್ಧಾರ ಸಮಿತಿ, ವಿಶ್ವ ಹಿಂದೂ ಪರಿಷತ್, ಮೂರ್ನಾಡುವಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.