ಸಾರಾಂಶ
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ತುಂಬಾ ಮುಖ್ಯವಾಗಿರಬೇಕು. ನಾಯಕನಾದವನು ಆಂತರಿಕ ಮತ್ತು ಬಾಹ್ಯಶಿಸ್ತು ಎರಡನ್ನು ರೂಢಿಸಿಕೊಳ್ಳಬೇಕು ಮತ್ತು ಸಮಾಜಮುಖಿಯಾಗಿರಬೇಕು ಎಂದು ಕರ್ನಾಟಕ ಪೋಲಿಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್. ಚನ್ನಬಸವಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ತುಂಬಾ ಮುಖ್ಯವಾಗಿರಬೇಕು. ನಾಯಕನಾದವನು ಆಂತರಿಕ ಮತ್ತು ಬಾಹ್ಯಶಿಸ್ತು ಎರಡನ್ನು ರೂಢಿಸಿಕೊಳ್ಳಬೇಕು ಮತ್ತು ಸಮಾಜಮುಖಿಯಾಗಿರಬೇಕು ಎಂದು ಕರ್ನಾಟಕ ಪೋಲಿಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್. ಚನ್ನಬಸವಣ್ಣ ತಿಳಿಸಿದರು.ಜೆ.ಪಿ. ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ 2025- 26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಸ್ತಿನ ಬಗ್ಗೆ ತಿಳಿಸಿಕೊಟ್ಟರು.
ಧೈರ್ಯ, ಶಿಸ್ತು, ಸಮಯಪಾಲನೆ ತಮ್ಮ ತಂಡವನ್ನು ಮುನ್ನೆಡೆಸುವ ಜಾಣ್ಮೆ ಸೇರಿದಂತೆ ಅನೇಕ ಗುಣಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಳ್ಳಬೇಕು. ಎಲ್ಲಾ ಮಕ್ಕಳು ಭವ್ಯಭಾರತ ನಿರ್ಮಾಣಕ್ಕೆ ಮೆಟ್ಟಿಲುಗಳಾಗಬೇಕು ಎಂದು ಅವರು ಕರೆ ನೀಡಿದರು.ಕ್ರೀಡಾ ಚಟುವಟಿಕೆಯ ಸಂಯೋಜಕ ರಿತೇಶ್ ಅವರ ಮಾರ್ಗದರ್ಶನದಲ್ಲಿ ಶಾಲೆಯ ನಾಯಕ ಎಸ್. ಶಿವನಂದಿ ಹಾಗೂ ಉಪನಾಯಕಿ ಚೈತನ್ಯಾ ಮಹೇಶ್ ಅವರ ಮುಂದಾಳತ್ವದಲ್ಲಿ ಎಲ್ಲಾ ಗುಂಪುಗಳು ಪಥಸಂಚಲನ ಮೂಲಕ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.
ಇದೇ ವೇಳೆ ಶಾಲೆಯ ವಿವಿಧ ತಂಡಗಳ ನಾಯಕರಿಗೆ ಶಾಲೆಯ ಪ್ರಾಂಶುಪಾಲೆ ಎಸ್.ಎನ್. ಅರ್ಚನಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಶಾಲೆಯ ವಿವಿಧ ತಂಡದ ನಾಯಕರುಗಳ ಪರಿಚಯವನ್ನು ಶಿಕ್ಷಕಿ ಕೆ.ಸಿ. ಮಮತಾ ನಡೆಸಿಕೊಟ್ಟರು. ಉಪ ಪ್ರಾಂಶುಪಾಲೆ ಕೆ.ಎ ಸುನಿತಾ ವಂದಿಸಿದರು.