ಮಂಗಳೂರು: ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ನಾಯಕತ್ವ ಸಾಮರ್ಥ್ಯ ಬಲಪಡಿಸುವ ಮತ್ತು ಸಾಂಸ್ಥಿಕ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಎಂ.ಸಿ.ಸಿ. ಬ್ಯಾಂಕ್ ತನ್ನ ಪ್ರಧಾನ ಕಚೇರಿಯಲ್ಲಿ ನಾಯಕತ್ವ ಅಧಿವೇಶನ ಆಯೋಜಿಸಿತ್ತು.

ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಹಿರಿಯ ಚಾರ್ಟರ್ಡ್‌ ಅಕೌಂಟೆಂಟ್‌ ಸಿಎ ಎಸ್.ಎಸ್. ನಾಯಕ್ ಮಾತನಾಡಿ, ಹೊಸ ವ್ಯವಹಾರ, ಅವಕಾಶಗಳನ್ನು ಹುಡುಕುವುದಕ್ಕಿಂತ ಮೊದಲು ಗ್ರಾಹಕರ ದೂರಗಳನ್ನು ಪರಿಹರಿಸುವುದು ಅತ್ಯಂತ ಮುಖ್ಯ. ಇದರಿಂದ ವಿಶ್ವಾಸ ಹಾಗೂ ನಂಬಿಕೆ ವೃದ್ಧಿಯಾಗುತ್ತದೆ. ವ್ಯವಹಾರ ವಿಸ್ತರಣೆಗಿಂತ ಅನುಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಹೇಳಿದರು.ಡಾ.ಕೆ. ರಾಜೇಶ್ ನಾಯಕ್ ಅವರು ಬ್ಯಾಂಕಿನಲ್ಲಿ ವಿಶ್ವಾಸ ನಿರ್ಮಾಣದ ಮಹತ್ವವನ್ನು ಒತ್ತಿ ಹೇಳಿದರು. ದೀರ್ಘಕಾಲೀನ ಗ್ರಾಹಕ ಸಂಬಂಧಗಳು ಮತ್ತು ಸ್ಥಿರ ವೃದ್ಧಿಗೆ ವಿಶ್ವಾಸವೇ ಆಧಾರ. ಪರಿಣಾಮಕಾರಿ ಆಲಿಸುವಿಕೆಯು ಗ್ರಾಹಕರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಸಮಸ್ಯೆಗೆ ಪರಿಹಾರ ಮತ್ತು ಸೇವಾ ಗುಣಮಟ್ಟ ಹೆಚ್ಚಿಸಲು ಸಹಾಯಕ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ನಿಜವಾದ ನಾಯಕತ್ವವು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮಾತ್ರವಲ್ಲದೆ, ಗ್ರಾಹಕರೊಂದಿಗೆ ವಿಶ್ವಾಸವನ್ನು ಪ್ರೇರೇಪಿಸುವ ಮತ್ತು ಶಾಶ್ವತ ಸಂಬಂಧಗಳನ್ನು ನಿರ್ಮಿಸುವ ಸಾಮರ್ಥ್ಯದಲ್ಲಿಯೂ ಪ್ರತಿಫಲಿಸುತ್ತದೆ ಎಂದು ಹೇಳಿದರು.ನಿರ್ದೇಶಕರ ಮಂಡಳಿ ಪರವಾಗಿ ಸಿ.ಜಿ. ಪಿಂಟೊ ಮಾತನಾಡಿದರು. ಅಕೌಂಟೆಂಟ್ ಆಲ್ವಿನ್ ಡಿಸೋಜ ನಿರೂಪಿಸಿ, ವಂದಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಚೇರಿಯ ಉನ್ನತ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಇದ್ದರು.