ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಹಿರಿಯರಿಂದಲೇ ಎಲ್ಲರೂ ಎನ್ನುವ ಸತ್ಯವನ್ನು ಅರಿತು, ಪ್ರತಿಯೊಬ್ಬರು ಹಿರಿಯರನ್ನು ಗೌರವಿಸಬೇಕೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ, ಇಲ್ಲಿನ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಅಧಿಕವಾಗಿದೆ. ಅವರು ನಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ ಅಲ್ಲದೆ ಪ್ರತಿ ಮನೆಯ ಹಿರಿಯ ಜೀವಿಗಳಾಗಿದ್ದಾರೆ. ಅಂತಹ ಅಮೂಲ್ಯ ಜೀವಗಳಿಗೆ ನಾವೆಲ್ಲರೂ ರಕ್ಷಕರಾಗಬೇಕೆಂದು ಶಾಸಕರು ಮಾರ್ಮಿಕವಾಗಿ ನುಡಿದರು. ಹಿರಿಯರು ಇದ್ದ ಮನೆ ತುಂಬಿದ ಕೊಡವಿದ್ದಂತೆ. ಅವರ ಮಾರ್ಗದರ್ಶನ, ಸಲಹೆ ಕಿರಿಯರಿಗೆ ಸದಾ ಬೇಕಾಗುತ್ತದೆ ಎಂದರು.ಹಿರಿಯರೇ ನಮಗೆ ಆಸ್ತಿ. ಆದರಿಂದು ಬಹಳಷ್ಟು ಜನರು ಅವರನ್ನು ಸಾಕಲು ಹಿಂದೆ ಮುಂದೆ ನೋಡಿ ಅನಾಥಾಶ್ರಮ, ಹಿರಿಯ ಮನೆಗಳಿಗೆ ಬಿಟ್ಟು ಬರುವ ಮೂಲಕ ಜೀವಂತವಿದ್ದಾಗಲೇ ಒಂಟಿ ಮಾಡಿ ನೋವು ಕೊಡುತ್ತಿದ್ದೇವೆ. ಹೀಗೆ ಮಾಡುವವರು ಒಮ್ಮೆ ಆಲೋಚನೆ ಮಾಡಬೇಕು, ಮುಂದೆ ನಾವೂ ಕೂಡಾ ಹಿರಿಯರಾಗುತ್ತೇವೆ, ಆಗ ನಮ್ಮ ಮಕ್ಕಳು ನಮ್ಮನ್ನು ಅನಾಥರಾಗಿ ಮಾಡಿದರೇ ಪರಸ್ಥಿತಿ ಏನಾಗುತ್ತದೆ ಎಂಬುವುದನ್ನು ತಿಳಿದುಕೊಂಡು ಗೌರವದಿಂದ ನಡೆಸಿಕೊಳ್ಳಬೇಕೆಂದು ಶಾಸಕ ಚೆನ್ನಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಪತ್ರಕರ್ತರಾದ ಪ್ರೊ. ಸಿ.ಎಮ್ ಪಟ್ಟೇದಾರ ಮಾತನಾಡಿದರು.ನಿವೃತ್ತ ಎಎಸ್ಐ ಸಾಮ್ಯುವೆಲ್, ಕಂದಾಯ ಇಲಾಖೆ ಲಕ್ಷ್ಮಣ ದೇಗಲಮಡಿ, ನಿರಾವರಿ ಇಲಾಖೆ ಮಲ್ಲಿನಾಥ ಮಲಗೊಂಡ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ವಾಹೀದ್ ಮಿಯಾ, ಶಿಕ್ಷಣ ಕ್ಷೇತ್ರ ಚಂದ್ರಾಮಪ್ಪ ಬಳಿಚಕ್ರ, ಸಮಾಜ ಸೇವಕ ಸಭಾಪತಿ ಮಹಾದೇವಪ್ಪ ಕಡ್ಡಿ ಅಬ್ಬೆತುಮಕೂರು, ಸಮಾಜ ಸೇವೆ ಶರಣಪ್ಪ ಜಾಕಾ, ನಿವೃತ್ತ ಶಿಕ್ಷಕರಾದ ಸಿದ್ದಪ್ಪ ಬಬಲಾದ, ಮಾಜಿ ನಗರಸಭೆ ಸದಸ್ಯರಾದ ಸಂಗಣ್ಣ ಬುಕಿಸ್ಟಗಾರ ಶಹಾಪುರ, ಸಮಾಜ ಸೇವೆ ನಿರ್ಮಲ್ ಕುಮಾರ ಜೈನ್, ಸಮಾಜ ಸೇವಕರಾದ ಬಿ.ಸಿ ಪಾಟೀಲ್, ನಿವೃತ್ತ ಶಿರಸ್ತೆದಾರ ನ್ಯಾಯಾಂಗ ಇಲಾಖೆ ಭೀಮರಾಯ, ಸಮಾಜ ಸೇವಕ ಮಾಣಿಕಮ್ಮ ಸೋಮಯ್ಯ ಸ್ವಾಮಿ, ಸಮಾಜ ಸೇವಕ ಶರಣಪ್ಪ ಆರ್ ಬಡಿಗೇರ್, ಸಮಾಜ ಸೇವಕ ಯಂಕೋಬಾ ಚಿಂತನಳ್ಳಿ ಅವರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷರಾದ ಬಾಬುರಾವ ಕಾಡ್ಲೂರ್, ನಗರ ಠಾಣೆ ಪಿಎಸ್ ಐ ಮಂಜೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಶಿರಸಗಿ, ಹಿರಿಯರಾದಚೆನ್ನಪ್ಪಗೌಡ ಮೋಸಂಬಿ, ಜಿಲ್ಲಾ ನಿವೃತ್ತ ಸಂಘದ ಬಂಡೆಪ್ಪ ಆಕಳ, ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಸುಭಾಶ್ಚಂದ್ರ ಕೌಲಗಿ ಇದ್ದರು.