ಮಂಗಳೂರು: ಸ್ವಾಮಿ ವಿವೇಕಾನಂದರ ಜೀವನವು ಯುವ ಜನತೆಗೆ ಶಾಶ್ವತ ಪ್ರೇರಣೆಯಾಗಿದೆ. ವ್ಯಕ್ತಿತ್ವ ವಿಕಾಸದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಮಿಷನ್‌ ಬಾಲಕಾಶ್ರಮದ ನಿರ್ವಾಹಕ ಸ್ವಾಮಿ ಯುಗೇಶಾನಂದಜಿ ಹೇಳಿದ್ದಾರೆ.ಮಂಗಳೂರು ವಿವಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ವತಿಯಿಂದ, ವಿದ್ಯಾರ್ಥಿ ಪರಿಷತ್, ವಿಶ್ವವಿದ್ಯಾನಿಲಯ ಕಾಲೇಜು ಸಹಯೋಗದಲ್ಲಿ ವಿವಿ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿ ಸುತ್ತೂರು ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ಸಂಯೋಜಕ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ವ್ಯಕ್ತಿತ್ವ ನಿರ್ಮಾಣವು ಆತ್ಮಶ್ರದ್ಧೆ, ಆತ್ಮವಿಶ್ವಾಸ, ಶಿಸ್ತು ಮತ್ತು ಮೌಲ್ಯಾಧಾರಿತ ಜೀವನಶೈಲಿಯಿಂದ ಆರಂಭವಾಗುತ್ತದೆ. ನಾಯಕತ್ವವು ಹುದ್ದೆಯಿಂದ ಬರುವುದಲ್ಲ. ಅದು ಒಳಗಿನ ಪ್ರಾಮಾಣಿಕತೆ, ಸೇವಾಭಾವ ಮತ್ತು ದೃಢಸಂಕಲ್ಪದಿಂದ ರೂಪುಗೊಳ್ಳುತ್ತದೆ. ಸ್ವಾಮಿ ವಿವೇಕಾನಂದರು ಯುವಕರಲ್ಲಿ ಅಡಗಿರುವ ಅಪಾರ ಶಕ್ತಿಯನ್ನು ಜಾಗೃತಗೊಳಿಸುವ ಸಂದೇಶ ನೀಡಿದ್ದು, ಆ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ನಾಯಕತ್ವ ಬೆಳೆಯುತ್ತದೆ ಎಂದು ವಿವರಿಸಿದರು.

ಸ್ವಾಮಿ ಯುಗೇಶಾನಂದಜಿ, ಜಿ.ಎಲ್. ತ್ರಿಪುರಾಂತಕ ಮತ್ತು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರನ್ನು ಸನ್ಮಾನಿಸಲಾಯಿತು.ಕುಲಪತಿ ಪ್ರೊ.ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿದರು. ಪ್ರೊ. ಜಯವಂತ ನಾಯಕ್ ವಂದಿಸಿದರು. ವಿದ್ಯಾರ್ಥಿನಿ ಪರಮೇಶ್ವರಿ ನಿರೂಪಿಸಿದರು.