ಶಿಕಾರಿಪುರ: ಪಿಯು ಉಪನ್ಯಾಸಕರು ಪ್ರೌಢಶಾಲೆಯ 9 ಮತ್ತು 10ನೇ ತರಗತಿಗೆ ಬೋಧನೆ ಮಾಡಬೇಕೆಂದು ಸರ್ಕಾರ ತಿದ್ದುಪಡಿಗೊಳಿಸಿರುವುದನ್ನು ಖಂಡಿಸಿ, ತಾಲೂಕಿನ ಪಿಯು ಉಪನ್ಯಾಸಕರು ಪ್ರತಿಭಟಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆ ಸಲ್ಲಿಸಿದರು.

ನಂತರದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಇತ್ತೀಚೆಗೆ ಸರ್ಕಾರ ಪಿಯು ಉಪನ್ಯಾಸಕರು ಪ್ರೌಢಶಾಲೆಯ 9 ಮತ್ತು 10ನೇ ತರಗತಿಗೆ ಬೋಧನೆ ಮಾಡಬೇಕೆಂದು ತಿದ್ದುಪಡಿಗೊಳಿಸಿದ ಆದೇಶದಿಂದ ನೇರ ನೇಮಕಾತಿ ಮತ್ತು ಬಡ್ತಿ ಹೊಂದಿದ ಉಪನ್ಯಾಸಕರಿಗೆ ತೊಂದರೆ ಆಗುವುದರ ಜತೆಗೆ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಬೋಧನೆ ಮಾಡುವ ಗೆಜೆಟೆಡ್ ''''ಬಿ'''' ವೃಂದದ ಉಪನ್ಯಾಸಕರು ಗ್ರೂಪ್ ''''ಸಿ'''' ಹುದ್ದೆಗೆ ನೇಮಕಾತಿಯು ಆಡಳಿತಾತ್ಮಕವಾಗಿ ವೃತ್ತಿ ಜೀವನಕ್ಕೆ ಧಕ್ಕೆ ತರುತ್ತದೆ ಎಂದರು.

ಈ ರೀತಿ ಆದೇಶ ಹೊರಡಿಸುವ ಮುನ್ನ ಶಿಕ್ಷಣ ತಜ್ಞರ, ಶಿಕ್ಷಕ ಕ್ಷೇತ್ರದ, ಪದವೀಧರ ಕ್ಷೇತ್ರದ ಪರಿಷತ್ ಸದಸ್ಯರ, ಉಪನ್ಯಾಸಕರ ಸಂಘದ ಸಮಾಲೋಚನಾ ಸಭೆ ನಡೆಸದೆ ಸಲಹೆ ಸೂಚನೆ ಸ್ವೀಕರಿಸದೆ, ಏಕಾಏಕಿ ನಿರ್ಣಯ ತೆಗೆದುಕೊಂಡಿರುವುದರ ಜತೆಗೆ, ಬೋಧನಾ ಅವಧಿಯನ್ನು ಹೆಚ್ಚಿಸುವ ಮೂಲಕ 9 ಮತ್ತು 10ನೇ ತರಗತಿಗೆ ಬೋಧನೆ ಮಾಡಬೇಕೆಂಬುದು ಹೊರೆಯಾಗಿದೆ. ರಾಜ್ಯ ಪತ್ರದ ಆದೇಶವು ಅವೈಜ್ಞಾನಿಕ ಹಾಗೂ ಉಪನ್ಯಾಸಕರ ಘನತೆಗೆ ಕುಂದು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು.

ಸರ್ಕಾರವು ಈ ಕೂಡಲೇ ಕರಡು ರಾಜ್ಯ ಪತ್ರವನ್ನು ಹಿಂತೆಗೆದುಕೊಂಡು ಈ ಹಿಂದಿನ ನಿಯಮಾವಳಿಯಂತೆ ಉಪನ್ಯಾಸಕರಿಗೆ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವಂತೆ ಆಕ್ಷೇಪಣೆ ಸಲ್ಲಿಸಲಾಯಿತು.

ಆಕ್ಷೇಪಣೆ ಪರಿಗಣಿಸಿ ಕರಡು ಪತ್ರವನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ಮುಂದಿನ ಹೋರಾಟವು ತೀವ್ರತರವಾಗಿರುತ್ತದೆಂದು ಪದಾಧಿಕಾರಿಗಳು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಉಪನ್ಯಾಸಕರ ಸಂಘದ ಜಿಲ್ಲಾ ಖಜಾಂಚಿ ದಿನಕರ್ ಎ., ಸಂಘಟನಾ ಕಾರ್ಯದರ್ಶಿ ಮಧು ಎಂ.ಪಿ., ತಾಲೂಕು ಸಂಘದ ಕಾರ್ಯದರ್ಶಿ ಪುಟ್ಟಪ್ಪ ಕೆ.ಎಚ್., ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಪಿ,ಸತೀಶ್ ಸಿಂಧೆ, ಡಾ.ಹರೀಶ್ ಕುಮಾರ್ ಮತ್ತಿತರರು ಹಾಜರಿದ್ದರು.