ಬಾಗಲಕೋಟೆ : ಸರ್ಕಾರ ನೀಡುವ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರ ನೀಡುವ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಹಾರಧಾನ್ಯ ಕಾಳಸಂತೆಯಲ್ಲಿ ಮಾರಾಟ ತಡೆಯುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಮಾರುಕಟ್ಟೆ, ಕಾನೂನು ಮಾಪನ ಶಾಸ್ತ್ರ, ಕಂದಾಯ ಹಾಗೂ ಇತರೆ ಇಲಾಖೆ ಸೇರಿದಂತೆ ತಂಡ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ತಂಡ ರಚಿಸಿದ್ದು, ಸಮಿತಿಯವರು ಪ್ರತಿ ತಿಂಗಳ ಕಾಳಸಂತೆಯಲ್ಲಿ ಆಹಾರಧಾನ್ಯ ಮಾರಾಟವಾಗದಂತೆ ನಿಗಾವಹಿಸಬೇಕೆಂದು ಸೂಚಿಸಿದರು.ತಾಲೂಕು ಮಟ್ಟದಲ್ಲಿ ಕಂದಾಯ, ಆಹಾರ, ಪೊಲೀಸ್, ಎಪಿಎಂಸಿ, ಕೃಷಿ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯವರು ಜಂಟಿಯಾಗಿ ದಾಳಿ ಮಾಡಿ, ಪ್ರಕರಣ ದಾಖಲಿಸಲು ಮುಂದಾಗಬೇಕು. ಹೊಟೇಲ್ಗಳಿಗೆ ಭೇಟಿ ನೀಡಿ, ಆಹಾರದ ಗುಣಮಟ್ಟ ಹಾಗೂ ಗೃಹೋಪಯೋಗಿ ಸಿಲಿಂಡರ್ಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಅದನ್ನು ಜಪ್ತಿ ಮಾಡಬೇಕು. ಅನಧಿಕೃತವಾಗಿ ಸರ್ಕಾರ ಅಕ್ಕಿ ಬಳಸುತ್ತಿದ್ದಲ್ಲಿ, ಕಾನೂನು ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದರು.
ಸಾರ್ವಜನಿಕ ಮಾಹಿತಿಗಾಗಿ ಸರ್ಕಾರದಿಂದ ನೀಡುವ ಉಚಿತ ಅಕ್ಕಿಯನ್ನು ತಮ್ಮ ಲಾಭಕ್ಕಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು. ಮುಕ್ತ ಮಾರುಕಟ್ಟೆಯ ದರದಲ್ಲಿ ದಂಡ ವಿಧಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 27 ಪ್ರಕರಣ ದಾಖಲಿಸುವ ಮೂಲಕ 48 ಜನರನು ಬಂಧಿಸಿ, 15 ವಾಹನ ಜಪ್ತ ಮಾಡಲಾಗಿದೆ. ಪ್ರಕರಣಗಳು ನ್ಯಾಯಾಲಯದಲ್ಲಿ ಯಾವ ಹಂತದಲ್ಲಿವೆ ಎಂಬ ಮಾಹಿತಿ ಸಂಗ್ರಹಿಸುವಂತೆ ಆಹಾರ ಇಲಾಖೆ ಜಂಟಿ ನಿರ್ದೇಶಕರು ಸೂಚಿಸಿದರು.ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಪ್ರಕರಣ ದಾಖಲಿಸುವ ಸಮಯದಲ್ಲಿ ಪೊಲೀಸ್ ಅಗತ್ಯ ಸಹಕಾರ ನೀಡಲಾಗುವುದು. ಆರೋಪಿಗಳ ವಿರುದ್ಧ ನಿಯಮಾನುಸಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ತಿಳಿಸಿದರು. ಜಂಟಿಯಾಗಿ ದಾಳಿ ಮಾಡುವ ಸಮಯದಲ್ಲಿ ಪೊಲೀಸ್ ರಿಗೆ ಮಾಹಿತಿ ನೀಡಿದಲ್ಲಿ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಆಯಾ ತಾಲೂಕಿನ ಆಹಾರ ನಿರೀಕ್ಷಕರು ಉಪಸ್ಥಿತರಿದ್ದರು.ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರಾತಿ ನೀಡುವಲ್ಲಿ ಪರಿಶಿಷ್ಟ ಜಾತಿಗೆ ಶೇ.17 ಮತ್ತು ಪಂಗಡದ ಜನಾಂಗದವರಿಗೆ ಶೇ.7 ರಷ್ಟು ನಿಯಮಾನುಸಾರ ಆದ್ಯತೆ ನೀಡುವ ಕುರಿತು ಸರ್ಕಾರದಿಂದ ಸಮಿತಿ ರಚಿಸಲಾಗಿದ್ದು, ಇದರನ್ವಯ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಪರಿಶೀಲಿಸಿ, ಪಡಿತರ ಚೀಟಿ ವಿತರಿಸುವ ಹಾಗೂ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು.-ಶಶಿಧರ ಕುರೇರ ಜಿಪಂ ಸಿಇಒ