ಸಾರಾಂಶ
ಸಿಎಂ ಸೈಟು ಕೊಡಿ ಎಂದು ಎಲ್ಲೂ ಆದೇಶ ಮಾಡಿಲ್ಲ. ಅವರ ಸಣ್ಣ ಸಹಿ ಕೂಡ ಇಲ್ಲ. ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ.
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸೃಷ್ಟಿಸಲಾಗಿದೆ. ರಾಜಭವನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದೆ ಎಂದರು.ಸಿಎಂ ಸೈಟು ಕೊಡಿ ಎಂದು ಎಲ್ಲೂ ಆದೇಶ ಮಾಡಿಲ್ಲ. ಅವರ ಸಣ್ಣ ಸಹಿ ಕೂಡ ಇಲ್ಲ. ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಮುಡಾಕ್ಕೆ ಅವರ ಧರ್ಮಪತ್ನಿ ಕೇಳಿಕೊಂಡಿದ್ದಾರೆ. ಇದಕ್ಕಾಗಿ ಮುಡಾದಿಂದ ಸೈಟು ನೀಡಲಾಗಿದೆ. ಇಷ್ಟೇ ಕೊಡಿ, ನಮಗೆ ಇಂತಹ ಜಾಗದಲ್ಲೇ ಕೊಡಿ ಎಂದು ಅವರು ಕೇಳಿಲ್ಲ. ಮುಡಾದಿಂದ ಕೊಡಲಾಗಿದೆ. ಈಗ ಇದನ್ನೇ ಹಗರಣ ಎಂದು ಸೃಷ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ನಮ್ಮ ಸರ್ಕಾರದಿಂದ ನಿವೃತ್ತ ನ್ಯಾಯಮೂರ್ತಿ ದೇಸಾಯಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದೆ. ಈ ಆಯೋಗ ತನಿಖೆ ನಡೆಸುತ್ತಿದೆ. ಈ ಆಯೋಗದಲ್ಲಿ ತಪ್ಪಾಗಿದೆ ಎಂದರೆ ಆಗ ರಾಜ್ಯಪಾಲರು ಕ್ರಮ ವಹಿಸಲಿ. ಈಗ ಯಾರೋ ಮನವಿ ಕೊಟ್ಟಿದ್ದಾರೆ ಎಂದು ನೋಟಿಸ್ ಕೊಡುವುದು ಸರಿಯಲ್ಲ. ರಾಜ್ಯಪಾಲರ ಮೇಲೆ ಒತ್ತಡ ಹೇರುವುದು ಕೂಡ ಸರಿಯಲ್ಲ. ಬಿಜೆಪಿ-ಜೆಡಿಎಸ್ನವರು ಇದನ್ನೇ ನೆಪ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ. ನಾವು ಈ ದೇಶದ ಸಂಪತ್ತು ಉಳಿಸಲು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದ್ದೆವು. ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅರ್ಥವೇ ಇಲ್ಲ ಎಂದರು.ಶಾಸಕರಾದ ಎಚ್.ಆರ್. ಗವಿಯಪ್ಪ, ಪ್ರಸಾದ್ ಅಬ್ಬಯ್ಯ, ಎಂ.ಪಿ. ಲತಾ ಮತ್ತಿತರರಿದ್ದರು.