ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಪ್ರಾಣಿ ಪಾಲಕನ ಮೇಲೆ ಚಿರತೆಯೊಂದು ಪರಚಿ ಗಾಯಗೊಳಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಪ್ರಾಣಿ ಪಾಲಕನ ಮೇಲೆ ಚಿರತೆಯೊಂದು ಪರಚಿ ಗಾಯಗೊಳಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. 48 ವರ್ಷ ವಯಸ್ಸಿನ ಶಾಂತಪ್ಪ ಗಾಯಗೊಂಡ ಪ್ರಾಣಿ ಪಾಲಕನಾಗಿದ್ದು, ಕೆನ್ನೆ ಮತ್ತು ಕುತ್ತಿಗೆ ಬಳಿ ಗಾಯಗೊಂಡು ಜಿಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಜ್ ಸ್ವಚ್ಛಗೊಳಿಸಲು ಚಿರತೆಯನ್ನು ಪಕ್ಕದ ಕೇಜ್ಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆಯಲ್ಲಿ ಕಬ್ಬಿಣದ ಮೆಷ್ ನಡುವೆ ಪಂಜು ತೂರಿಸಿ ಪರಚಿ ಪ್ರಾಣಿ ಪಾಲಕನನ್ನು ಗಾಯಗೊಳಿಸಿದೆ.ಉದ್ಯಾನದಲ್ಲಿ ಹೊರಗುತ್ತಿಗೆ ನೌಕರನಾಗಿ 25 ವರ್ಷದಿಂದ ಕೆಲಸ ಮಾಡುತ್ತಿದ್ದ ಶಾಂತಪ್ಪನ ಮೇಲೆ ಈ ಹಿಂದೆ ಕಾಡೆಮ್ಮೆ ದಾಳಿ ಮಾಡಿತ್ತು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪತಿಗೆ ಕಾಯಂ ನೌಕರಿ ನೀಡಬೇಕೆಂದು ಪತ್ನಿ ಜಯಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಗತ್ಯ ಕ್ರಮ:ಕೇಜ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪರಚಿ ಗಾಯಗೊಳಿಸಿದೆ. ಯಾವುದೇ ಅಪಾಯವಿಲ್ಲ, ಅಚಾತುರ್ಯ ನಡೆದಿದೆ. ಸದ್ಯಕ್ಕೆ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್ ತಿಳಿಸಿದ್ದಾರೆ.