ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ನಾಗೇಂದ್ರಗಡ ಗ್ರಾಮಸ್ಥರು

| Published : Jun 22 2025, 01:18 AM IST

ಸಾರಾಂಶ

ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಜನರ ಜೀವಭಯಕ್ಕೆ ಕಾರಣವಾಗಿದ್ದ ಚಿರತೆಯನ್ನು ಶನಿವಾರ ಸಂಜೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಗಜೇಂದ್ರಗಡ: ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಜನರ ಜೀವಭಯಕ್ಕೆ ಕಾರಣವಾಗಿದ್ದ ಚಿರತೆಯನ್ನು ಶನಿವಾರ ಸಂಜೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಗ್ರಾಮ ಹಾಗೂ ರೈತರ ಜಮೀನಿನಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಾ ಬಂದಿದ್ದ ಅರಣ್ಯ ಇಲಾಖೆಯ ಬಲೆಗೂ ಬೀಳದೆ ತಪ್ಪಿಸಿಕೊಂಡು ನಾಯಿ, ಹಂದಿ ಹಾಗೂ ಕರು ಸೇರಿ ಇತರ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಹೀಗಾಗಿ ಅರಣ್ಯ ಇಲಾಖೆಗೆ ಸವಾಲಾಗಿತ್ತು.

ನಾಗೇಂದ್ರಗಡ ಗ್ರಾಮದಲ್ಲಿ ಚಿರತೆ ಬಂದಿದೆ ಎಂದು ಅರಣ್ಯ ಇಲಾಖೆಗೆ ಶನಿವಾರ ಬೆಳಗ್ಗೆ ಕರೆಬಂದ ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆ ಗ್ರಾಮದಲ್ಲಿ ಚಿರತೆ ಓಡಾಟ ಖಚಿತ ಪಡಿಸಿಕೊಂಡಿದೆ. ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಪಶು ವೈದ್ಯಾಧಿಕಾರಿಗಳೂ ಕಾರ್ಯಾಚರಣೆಗೆ ಇಳಿದಿದ್ದು ಚಿರತೆ ಮೇಲೆ ಅರವಳಿಕೆ ಮದ್ದನ್ನು ಪ್ರಯೊಗ ಮಾಡಿ, ಬಳಿಕ ಬಲೆ ಎಸೆದಿದ್ದಾರೆ. ಚಿರತೆ ಪ್ರಜ್ಞೆ ತಪ್ಪಿದ್ದನ್ನು ಖಚಿತಪಡಿಸಿಕೊಂಡು ಬೋನ್‌ಗೆ ಹಾಕಿ ಜಿಲ್ಲಾ ಮೃಗಾಲಯಕ್ಕೆ ರವಾನಿಸಿದ್ದಾರೆ.

ಈ ವೇಳೆ ಗದಗ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ, ಗಜೇಂದ್ರಗಡ ಉಪ-ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ, ಪಶು ವೈದ್ಯಾಧಿಕಾರಿ ನಿಖಿಲ ಕುಲಕರ್ಣಿ, ಪ್ರವೀತಾ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಅಮಿನಸಾಬ ಬಳೂಟಗಿ, ಮಂಜು ಬೋಯಿಟೆ ಸೇರಿ ಇತರರು ಇದ್ದರು.

"ನಾಗೇಂದ್ರಗಡ ಗ್ರಾಮದಲ್ಲಿ ಚಿರತೆ ಓಡಾಟದ ಮಾಹಿತಿ ಬಂದ ತಕ್ಷಣವೇ ಚಿರತೆ ಸೆರೆಗೆ ಇಲಾಖೆಯಿಂದ ತಂಡವೊಂದನ್ನು ರಚಿಸಿ ಗ್ರಾಮಸ್ಥರ ಸಹಕಾರದಿಂದ ಚಿರತೆಯನ್ನು ಸೆರೆಹಿಡಿಯಲಾಗಿದೆ. ಗಜೇಂದ್ರಗಡ ತಾಲೂಕಿನ ಭೈರಾಪೂರ, ವದೆಗೋಳ ಹಾಗೂ ನಾಗೇಂದ್ರಗಡ ಗ್ರಾಮದಲ್ಲಿ ಒಂದರಂತೆ ಒಟ್ಟು ೩ ಚಿರತೆಗಳನ್ನು ಸೆರೆಹಿಡಿಯಲಾಗಿದೆ ಎಂದು ಗದಗ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ ಹೇಳಿದರು.