ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ಕಾಂಚಳ್ಳಿ ಹಾಗೂ ಬಸಪ್ಪನ ದೊಡ್ಡಿ ಮಾರ್ಗ ಮಧ್ಯ ಇರುವಂತಹ ಪ್ರಕಾಶ ಎಂಬುವರ ತೋಟದಲ್ಲಿ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಬಸಪ್ಪನ ದೊಡ್ಡಿ ಗ್ರಾಮದ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು ಜನರನ್ನ ಆತಂಕಕ್ಕೆ ಈಡು ಮಾಡಿದೆ.ಚಿರತೆ ಮರಿಗಳು ಪ್ರತ್ಯಕ್ಷವಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಹನೂರು ಬಫರ್ ವಲಯದ ನಾಗರಾಜು ಮತ್ತು ತಂಡದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ಚಿರತೆ ಮರಿಗಳನ್ನು ಸುರಕ್ಷಿತವಾಗಿ ಪಡೆದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಚಿರತೆ ಸೆರೆ ಹಿಡಿಯಲು ಆಗ್ರಹ :ಮರಿ ಚಿರತೆ ಜೊತೆಗೆ ತಾಯಿ ಸಹ ಇದೆ ಎಂದು ಪ್ರತ್ಯಕ್ಷ ವಾಗಿ ಕಬ್ಬು ಕಟಾವು ಮಾಡಿರುವ ಕಾರ್ಮಿಕರು ಹೇಳಿದ್ದು ತಕ್ಷಣ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.
ಆತಂಕದಲ್ಲಿ ಜನರು:ಗುಂಡಾಪುರ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ ಈ ಭಾಗದಲ್ಲಿ ಈ ಹಿಂದೆಯೇ ಚಿರತೆ ಹಾವಳಿ ಹೆಚ್ಚಾಗಿದ್ದು ಕುರಿ ಮೇಕೆ ಹಾಗೂ ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನ ಬಲಿ ಪಡೆದು ಸಾಕಷ್ಟು ಸಾವು ನೋವುಗಳನ್ನ ಉಂಟು ಮಾಡಿದ್ದ ನಿದರ್ಶನವು ಇತ್ತು. ಇದಕ್ಕನುಗುಣವಾಗಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಒತ್ತಾಯಪೂರ್ವಕವಾಗಿ ಚಿರತೆಸರ ಹಿಡಿಯಲು ಬೋನು ಸಹ ಅಳವಡಿಸಲಾಗಿತ್ತು. ಆದರೆ ಚಿರತೆ ಬಲೆಗೆ ಬಿದ್ದಿರಲಿಲ್ಲ. ಇದೀಗ ಮತ್ತೆ ಚಿರತೆ ಮರಿಗಳು ಪ್ರತ್ಯಕ್ಷವಾಗಿರುವುದು ಆ ಭಾಗದ ಜನರನ್ನು ಮತ್ತಷ್ಟು ಆತಂಕ ಕಿಡು ಮಾಡಿದೆ.
ಇದೇ ಸಂದರ್ಭದಲ್ಲಿ ಹನೂರು ಬಫರ್ ವಲಯದ ವಲಯ ಅರಣ್ಯ ಅಧಿಕಾರಿ ನಾಗರಾಜು ಕೆಎಂ, ರಾಮಾಪುರ ವಲಯ ಅರಣ್ಯ ಅಧಿಕಾರಿ ಉಮಾಪತಿ, ಸಿಬ್ಬಂದಿಗಳಾದ ಗಿರೀಶ್,ನಂದೀಶ್, ಅಶೋಕ್, ಚಿನ್ನಸ್ವಾಮಿ ಸುರೇಶ್, ಭಾಗವಹಿಸಿದ್ದರು.