- ತಂಗ್ಳಿಟ್ಟು ಬಳಿ ಹೆಣ್ಣು ಚಿರತೆ ಶವ ಪತ್ತೆ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಚಿರತೆ ಮತ್ತು ಮುಳ್ಳುಹಂದಿ ಕಾದಾಟದಲ್ಲಿ ಚಿರತೆಯು ಮೃತಪಟ್ಟಿದ್ದು, ಘಟನೆ ತಾಲೂಕಿನ ರಂಗೂಪುರ ಬಳಿಯ ತಂಗ್ಳಿಟ್ಟು ಮಲ್ಲಪ್ಪನ ಬೆಟ್ಟದ ತಪ್ಪಲಿನ ಬಳಿ ಚಿರತೆಯ ಮೃತ ದೇಹ ಪತ್ತೆಯಾಗಿದೆ.ಸುಮಾರು ಎರಡೂವರೆ ವರ್ಷದ ಹೆಣ್ಣು ಚಿರತೆ ಮೃತ ದೇಹದಲ್ಲಿ ಮುಳ್ಳುಹಂದಿಯ ಮುಳ್ಳು ಇರುವುದರಿಂದ ಚಿರತೆ ಹಾಗೂ ಮುಳ್ಳಂದಿ ಕಾದಾಟದಲ್ಲಿ ಚಿರತೆ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ರಂಗೂಪುರ ಗ್ರಾಮದ ತಂಗ್ಳಿಟ್ಟು ಮಲ್ಲಪ್ಪನ ಗುಡ್ಡದ ಪೂರ್ವ ದಿಕ್ಕಿನ ತಪ್ಪಲಿನಲ್ಲಿ ಕರಡಿ ಸೆರೆಗೆ ಇಡಲಾಗಿದ್ದ ಬೋನಿನ ಸಮೀಪವೇ ಚಿರತೆಯ ಶವ ಪತ್ತೆಯಾಗಿದ್ದು, ಭಾನುವಾರ ಬೆಳಗ್ಗೆ ದಾರಿ ಹೋಕರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿದ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್‌, ಓಂಕಾರ ವಲಯ ಅರಣ್ಯಾಧಿಕಾರಿ ಹನುಮಂತಪ್ಪ ಸ್ಥಳಕ್ಕೆ ಭೇಟಿ ನೀಡಿದರು.ಬಳಿಕ ಅರಣ್ಯ ಇಲಾಖೆ ಪಶು ವೈದ್ಯ ನಾಗೇಂದ್ರ ಚಿರತೆಯ ಶವ ಪರೀಕ್ಷೆ ನಡೆಸಿದರು. ಬಳಿಕ ಚಿರತೆ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

---

ಚಿರತೆ ಸಾವನ್ನಪ್ಪಿದ್ದು, ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆಯ ಕೆಲ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಚಿರತೆಯ ಮೈಮೇಲೆ ಮುಳ್ಳುಹಂದಿಯ ಮುಳ್ಳುಗಳಿವೆ.- ಕೆ. ಸುರೇಶ್‌, ಎಸಿಎಫ್‌