ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಗೆಜ್ಜೆಹಣಕೋಡು ಗ್ರಾಮದ ಮನೆ ಅಂಗಳದಲ್ಲೇ ಚಿರತೆ ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಂಗಳವಾರ ಸಂಜೆ ೭.೩೦ರ ಸಮಯಕ್ಕೆ ಗ್ರಾಮದ ಉದಯ ಎಂಬವರ ಅಂಗಳದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದನ್ನು ಕಂಡ ಗೃಹಿಣಿ ವಿದ್ಯಾ ಕೂಗಿಕೊಂಡಾಗ ಚಿರತೆ ಪೊದೆಯೊಳಗೆ ಹೋಗಿದೆ. ಚಿರತೆಯ ಚಲನವಲನ ದೃಶ್ಯ ಮನೆಯ ಮುಂಭಾಗದಲ್ಲಿದ್ದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ದನ ಕರುಗಳು ಕೊಟ್ಟಿಗೆಯಲ್ಲಿದ್ದು, ಸಾಕು ಪ್ರಾಣಿಗಳಿಗೆ ತೊಂದರೆಯಾಗಿಲ್ಲ. ಸ್ಥಳಕ್ಕೆ ಆರ್‌ಎಫ್‌ಒ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಒ ಪ್ರಶಾಂತ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಗೆಜ್ಜೆ ಹಣಕೋಡು ಗ್ರಾಮದ ರಸ್ತೆ ಬದಿಯಲ್ಲಿ ಹಾಗೂ ಬೇಳೂರು ಶ್ರೀ ಮುರುಘಾರಾಜೇಂದ್ರ ಮಠದ ತೋಟದಂಚಿನ ಅರಣ್ಯ ಭಾಗದಲ್ಲಿ ಚಿರತೆ ಹಿಡಿಯುವ ಬೋನು ಅಳವಡಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಚಿರತೆ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಕಾರೆಕೊಪ್ಪ ಗ್ರಾಮದಲ್ಲಿ ನಾಯಿ ಮತ್ತು ಕರುವನ್ನು ಚಿರತೆ ಕಚ್ಚಿ ಗಾಯಗೊಳಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ.