ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿಯ ಜನವಸತಿ ಪ್ರದೇಶದಲ್ಲಿ ಹಾಡಹಗಲಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಆ ಭಾಗದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ.
ತೀರ್ಥಹಳ್ಳಿ: ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿಯ ಜನವಸತಿ ಪ್ರದೇಶದಲ್ಲಿ ಹಾಡಹಗಲಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಆ ಭಾಗದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ.
ಶನಿವಾರ ಮಧ್ಯಾಹ್ನದ ವೇಳೆ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೇಕೇರಿ ಸಮೀಪದ ಹಸಿರುಮನೆ ಗ್ರಾಮದ ಜನವಸತಿ ಪ್ರದೇಶದ ಸಮೀಪ ಚಿರತೆಯೊಂದು ಕೋಳಿಯನ್ನು ಕಚ್ಚಿಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ಭಯಬೀತರಾಗಿದ್ದಾರೆ. ಕೋಳಿ ಅಂಗಡಿ ಮಾಲೀಕರು ಸತ್ತ ಕೋಳಿ ಮತ್ತು ತ್ಯಾಜ್ಯವನ್ನು ತಂದು ಈ ಭಾಗದ ಸೇತುವೆ ಮೋರಿ ಕೆಳಗೆ ಎಸೆಯುತ್ತಿದ್ದಾರೆ. ಇದನ್ನು ತಿನ್ನುವ ಆಸೆಗೂ ಚಿರತೆ ಈ ಭಾಗದಲ್ಲೇ ಸಂಚರಿಸುತ್ತಿದೆ ಎಂಬ ಮಾತು ಕೇಳಿ ಬಂದಿದೆ.ಇತ್ತೀಚಿನ ದಿನಗಳಲ್ಲಿ ನಾಲೂರು ಗ್ರಾಮ ಪಂಚಾಯಿತಿ ಭಾಗದಲ್ಲಿ ನಾಯಿಗಳ ಮೇಲೆ ಚಿರತೆಗಳ ದಾಳಿ ನಡೆಯುತ್ತಿದ್ದು, ಜಾನುವಾರು ಕೊಟ್ಟಿಗೆಗಳಿಗೂ ಹೊಂಚು ಹಾಕುತ್ತಿರುವುದೂ ಇದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸೌಧೆ, ದರಗು ಮತ್ತಿತರ ಕೆಲಸಗಳಿಗೆ ಕಾಡಿಗೆ ಹೋಗುವುದಕ್ಕೂ ಭಯವಾಗುತ್ತಿದೆ. ಮಹಿಳೆಯರು ಮಕ್ಕಳು ಮನೆಯಿಂದ ಹೊರ ಬರುವುದಕ್ಕೂ ಹೆದರುತ್ತಿದ್ದಾರೆ. ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.