ಹಾಸನ: ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಸಾವನ್ನಪ್ಪಿದ ಶೃತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಪತಿ ಪುನೀತ್ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗಿರುವುದರಿಂದ ನನ್ನ ಮಗುವನ್ನು ಕನಿಷ್ಠ ಆರು ತಿಂಗಳಾದರೂ ವೈದ್ಯರೇ ಪೋಷಣೆ ಮಾಡಲಿ ಎಂದು ಕಣ್ಣೀರಿನ ಕೋರಿಕೆ ಮುಂದಿಟ್ಟರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಹೆರಿಗೆ ಯಾವ ದಿನವಾಗುತ್ತದೆ ಎಂದು ನಮಗೆ ಸ್ಪಷ್ಟವಾಗಿ ತಿಳಿಸಲಿಲ್ಲ. ಭಾನುವಾರ ರಜಾದಿನವಾಗಿದ್ದರಿಂದ ಹಿರಿಯ ವೈದ್ಯರು ಕರ್ತವ್ಯದಲ್ಲಿರದೆ, ಯುವ ವೈದ್ಯರಿಂದ ಚಿಕಿತ್ಸೆ ಮಾಡಿಸಲಾಗಿದೆ ಎಂದು ಆರೋಪಿಸಿದರು. ನನ್ನ ಹೆಂಡತಿಯು ಆಸ್ಪತ್ರೆ ಒಳಗೆ ಹೋಗುವಾಗ ಚೆನ್ನಾಗಿಯೇ ಇದ್ದಳು. ಆಕೆಗೆ ಯಾರು ಚಿಕಿತ್ಸೆ ನೀಡಿದರು ಎಂಬುದೂ ನನಗೆ ಗೊತ್ತಿಲ್ಲ. ಹೊಟ್ಟೆನೋವು ಎಂದು ಹೇಳಿದಾಗ ವೈದ್ಯರು ಲಘುವಾಗಿ ಮಾತನಾಡಿದ್ದಾರೆ. ಸರಿಯಾದ ಗಮನ ಕೊಡಲಿಲ್ಲ ಎಂದರು.

ಆಸ್ಪತ್ರೆ ಹೊರಗೆ ಚೆನ್ನಾಗಿದ್ದರೂ ಒಳಗೆ ಮೂಲ ಸೌಲಭ್ಯಗಳ ಕೊರತೆ ಇದೆ. ಯಾವುದೇ ಹಿರಿಯ ವೈದ್ಯರು ನನ್ನ ಪತ್ನಿಯನ್ನು ಸರಿಯಾಗಿ ನೋಡುತ್ತಿಲ್ಲ ಎಂದು ಆಕೆ ನನಗೆ ಫೋನ್ ಮಾಡಿ ಹೇಳಿದ್ದರು. ಡೆಲಿವರಿ ನಂತರ ಚೆನ್ನಾಗಿದ್ದರು ಎಂದು ಹೇಳುತ್ತಾರೆ. ಆದರೆ ಮಧ್ಯೆ ಏನಾಯಿತು? ಎಂದು ಪ್ರಶ್ನಿಸಿದರು. ಮಗುವನ್ನು ನೋಡಲು ಐಸಿಯುವಿಗೆ ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪುನೀತ್, ನನಗೆ ಯಾವುದೇ ಪರಿಹಾರಕ್ಕಾಗಿ ಇಲ್ಲಿಗೆ ಬಂದಿಲ್ಲ. ನನಗೆ ನ್ಯಾಯ ಬೇಕು. ನನ್ನ ಪತ್ನಿ ಸಾವಿಗೆ ಕಾರಣರಾದವರು ಶಿಕ್ಷೆ ಅನುಭವಿಸಬೇಕು. ಮುಂದೆ ಯಾರಿಗೂ ಹೀಗೆ ಆಗಬಾರದು ಎಂದು ಹೇಳಿದರು. ಹಾಲುಗಲ್ಲದ ಮಗುವಿನ ಆರೈಕೆ ಮಾಡುವುದು ಕಷ್ಟವಾಗಿದೆ ಎಂದು ಹೇಳಿದ ಅವರು, ಮುಂದಿನ ಆರು ತಿಂಗಳ ಕಾಲ ನನ್ನ ಮಗುವನ್ನು ವೈದ್ಯರೇ ಸಾಕಿ, ನಂತರ ನನಗೆ ಹಸ್ತಾಂತರಿಸಲಿ. ಅವರು ಮಾಡಿದ ತಪ್ಪಿಗೆ ಈ ಜವಾಬ್ದಾರಿ ಹೊತ್ತುಕೊಳ್ಳಲಿ ಎಂದು ಭಾವುಕರಾಗಿ ಮನವಿ ಮಾಡಿದರು. ಗರ್ಭಿಣಿಯಾಗಿದ್ದರೂ ಶ್ರುತಿ ಸಂಪೂರ್ಣ ಆರೋಗ್ಯವಾಗಿದ್ದರು. ರಕ್ತ ಹಾಯಿಸಿದ ಬಳಿಕ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು. ಸರ್ಕಾರಿ ವೈದ್ಯರು ಖಾಸಗಿಯಲ್ಲಿ ಉತ್ತಮ ಸೇವೆ ನೀಡುತ್ತಾರೆ. ಇಲ್ಲಿ ಏಕೆ ನಿರ್ಲಕ್ಷ್ಯ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲ್ಲಿ ಮೃತ ಶ್ರುತಿ ಸಂಬಂಧಿಕರಾದ ಲಾವಣ್ಯ, ಜ್ಯೋತಿ, ಯಶು, ಯತೀಶ್, ಶಿವಣ್ಣ, ತೀರ್ಥ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.