ಸಾರಾಂಶ
ಕನ್ನಡಪ್ರಭ ವಾರ್ತೆ, ತುರುವೇಕೆರೆ
ಸಂವಿಧಾನ ರಚನೆ ಮಾಡಿರುವ ಡಾ.ಅಂಬೇಡ್ಕರ್ ರವರ ಕುರಿತು ಕೇಂದ್ರ ಗೃಹ ಸಚಿವ ಅಮೀತ್ ಶಾ ವ್ಯಂಗ್ಯವಾಗಿ ಮಾತನಾಡಿರುವುದು ಖಂಡನೀಯ. ಅಮಿತ್ ಶಾ ರವರು ಕೂಡಲೇ ಅಂಬೇಡ್ಕರ್ ರವರ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮಾಪಣೆ ಕೇಳಬೇಕೆಂದು ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಆಗ್ರಹಿಸಿದ್ದಾರೆ.ಅಂಬೇಡ್ಕರ್ ರವರು ಭಾರತ ರತ್ನವಾಗಿದ್ದಾರೆ. ಅಂತಹವರ ಬಗ್ಗೆ ಲಘು ಮಾತನಾಡಿರುವುದನ್ನು ಇಡೀ ದೇಶವೇ ಖಂಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು. ದೇಶದ ತುಂಬೆಲ್ಲಾ ಅಮಿತ್ ಶಾ ವಿರುದ್ಧ ಹೋರಾಟಗಳು ನಡೆಯುತ್ತಲೇ ಇರುವುದನ್ನು ಗಮನಿಸಿ ಪ್ರಧಾನಿ ನರೇಂದ್ರ ಮೋದಿಯವರು ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ಈ ಮೊದಲೇ ವಜಾ ಮಾಡಬೇಕಿತ್ತು. ಆದರೆ ಪ್ರಧಾನ ಮಂತ್ರಿಗಳು ಈ ನಿರ್ಣಯ ತೆಗೆದುಕೊಳ್ಳದಿರುವುದು ದುರದೃಷ್ಠಕರ ಎಂದು ವಿಷಾದಿಸಿದರು.ರಾಜ್ಯದ ದಲಿತ ಸಮುದಾಯಕ್ಕೆ ಸೇರಿರುವ ಪ್ರಿಯಾಂಕ ಖರ್ಗೆಯವರನ್ನು ಟಾರ್ಗೆಟ್ ಮಾಡಿರುವ ಕೋಮುವಾದಿ ಬಿಜೆಪಿಯವರ ಪಿತೂರಿಯನ್ನು ಹೋರಾಟದ ಮೂಲಕವೇ ಬಗ್ಗು ಬಡಿಯಲು ರಾಜ್ಯದ ದಲಿತರು ಸಿದ್ಧರಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಪರವಾಗಿ ಇಡೀ ದಲಿತ ಸಮುದಾಯ ಇದೆ ಎಂಬುದನ್ನು ಸಾಬೀತುಪಡಿಸಲು ಗುರುವಾರ ನಡೆಯಲಿರುವ ಸಂವಿಧಾನ ವರ್ಸಸ್ ಮನುವಾದ ಕಾರ್ಯಕ್ರಮಕ್ಕೆ ತಾಲೂಕಿನಿಂದ ನೂರಾರು ಕಾರ್ಯಕರ್ತರು ಭಾಗವಹಿಸಲು ತೆರಳುತ್ತಿದ್ದಾರೆ. ದೇಶದ ದಲಿತರು, ಅಬಲರು, ಅಸಹಾಯಕರಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರೇ ದೇವರು. ಅವರಿಗೆ ಬೇರೆ ದೇವರೇ ಇಲ್ಲ. ಅಂಬೇಡ್ಕರ್ ರವರು ಇಲ್ಲದೇ ಬೇರೇನೂ ಇಲ್ಲ. ಅಂಬೇಡ್ಕರ್ ರವರು ಇಲ್ಲದೇ ಇರುವ ಜಗತ್ತನ್ನು ನೆನೆಸಿಕೊಳ್ಳಲೂ ಅಸಾಧ್ಯ. ಅವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಜೀವಿಸುತ್ತಿದ್ದೇವೆ ಎಂದು ಬಾಣಸಂದ್ರ ಕೃಷ್ಣ ಮಾದಿಗ ಹೇಳಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಾಯಸಂದ್ರ ಸುಬ್ರಹ್ಮಣ್ಯ, ಡೊಂಕಿಹಳ್ಳಿ ರಾಮಣ್ಣ, ಮಹದೇವಯ್ಯ, ಪುರ ರಾಮಚಂಧ್ರಯ್ಯ, ತೋವಿನಕರೆ ರಂಗಸ್ವಾಮಿ, ಕುಣಿಕೇನಹಳ್ಳಿ ಲೋಕೇಶ್, ಪ್ರಸನ್ನಕುಮಾರ್, ಬಡಾವಣೆ ಶಿವಣ್ಣ, ವಿಜಯಕುಮಾರ್, ಬೀಚನಹಳ್ಳಿ ರಾಮಣ್ಣ, ಶಶಿ, ಸುನಿಲ್, ಮಧು ಸಿದ್ದಾಪುರ, ಅರಳೀಕೆರೆ ಶೇಖರ್, ಟಿ.ಹೊಸಳ್ಳಿ ಮಹಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.