ಆಯನೂರು ಕುಹಕದ ಮಾತುಗಳ ನಿಲ್ಲಿಸಲಿ: ಎಸ್‌.ರುದ್ರೇಗೌಡ

| Published : Mar 31 2024, 02:00 AM IST

ಸಾರಾಂಶ

ಬಿಜೆಪಿಯಿಂದ ಎಲ್ಲ ರೀತಿಯ ಲಾಭ ಪಡೆದು ಈಗ ಹೊರ ಹೋಗಿರುವ ಆಯನೂರು ಮಂಜುನಾಥ್ ಬದ್ಧತೆಯ ಮಾತನಾಡುತ್ತಿಲ್ಲ. ಆಯನೂರು ಮಂಜುನಾಥ್ ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಕಳಕಳಿ ವ್ಯಕ್ತಪಡಿಸುವಂತೆ ಮಾತನಾಡುವುದರ ಹಿಂದೆ ಕುಹಕವಿದೆ. ಯಡಿಯೂರಪ್ಪನವರು ಬಿಜೆಪಿಯ ಇಡೀ ರಾಜ್ಯದಲ್ಲಿ ಬಲವಾಗಿ ಕಟ್ಟಿದವರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಯನೂರು ಮಂಜುನಾಥ್ ನಾಲ್ಕು ಮನೆಗಳಲ್ಲೂ ಕೆಲಸ ಮಾಡಿದ್ದಾರೆ. ಅದು ಬಿಜೆಪಿಯ ಕೊಡುಗೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ತಿರುಗೇಟು ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಯನೂರು ಮಂಜುನಾಥ್, ಸಂಸದರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಚರ್ಚೆಗೂ ಸಿದ್ಧ ಎಂದಿದ್ದಾರೆ. ಖಂಡಿತಾ ಅವರ ಸಾಧನೆಗಳ ಪಟ್ಟಿಯನ್ನೇ ನಾವು ಕೊಟ್ಟಿದ್ದೇವೆ. ಅದರಲ್ಲಿ ಏನು ಸುಳ್ಳಿದೆ ಎಂದು ಹೇಳಲಿ ಎಂದು ಹರಿಹಾಯ್ದರು.

ಬಿಜೆಪಿಯಿಂದ ಎಲ್ಲ ರೀತಿಯ ಲಾಭ ಪಡೆದು ಈಗ ಹೊರ ಹೋಗಿರುವ ಆಯನೂರು ಮಂಜುನಾಥ್ ಬದ್ಧತೆಯ ಮಾತನಾಡುತ್ತಿಲ್ಲ. ಆಯನೂರು ಮಂಜುನಾಥ್ ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಕಳಕಳಿ ವ್ಯಕ್ತಪಡಿಸುವಂತೆ ಮಾತನಾಡುವುದರ ಹಿಂದೆ ಕುಹಕವಿದೆ. ಯಡಿಯೂರಪ್ಪನವರು ಬಿಜೆಪಿಯ ಇಡೀ ರಾಜ್ಯದಲ್ಲಿ ಬಲವಾಗಿ ಕಟ್ಟಿದವರು. ಹೋರಾಟದಲ್ಲಿ ತೊಡಗಿಕೊಂಡವರು. ಮೋದಿ ಹೇಳಿದಂತೆ ತನ್ನ ಯವ್ವನವನ್ನೇ ಧಾರೆ ಎರೆದು ಪಕ್ಷ ಕಟ್ಟಿದ್ದಾರೆ. ಇಂತಹವರ ಬಗ್ಗೆ ಆಯನೂರು ಮಾತನಾಡುತ್ತಿರುವುದು ವಿಷಾದನೀಯ. ಅವರ ಮಕ್ಕಳಿಗೆ ನಿಮ್ಮ ತಂದೆಯನ್ನು ಹೇಗೆ ರಕ್ಷಣೆ ಮಾಡುತ್ತೀರಾ? ನಿಮ್ಮ ತಂದೆಯನ್ನೇ ರಕ್ಷಣೆ ಮಾಡದವರು ದೇಶ ರಕ್ಷಣೆ ಮಾಡುತ್ತಿರಾ ಎಂದು ಪ್ರಶ್ನೆ ಕೇಳುತ್ತಾರೆ. ಇದು ಅತ್ಯಂತ ನೋವಿನ ವಿಷಯ ಎಂದು ಟೀಕಿಸಿದರು.

ಒಬ್ಬ ಮಗನಿಗೆ ತಂದೆಯೂ ಮುಖ್ಯ. ಪಕ್ಷವೂ ಮುಖ್ಯವಾಗಿರುತ್ತದೆ ಎಂದರಲ್ಲದೇ, ಆಯನೂರು ತಮ್ಮ ಕುಹಕದ ಮಾತುಗಳ ನಿಲ್ಲಿಸಬೇಕು. ರಾಜಕಾರಣ ಬರುತ್ತದೆ, ಹೋಗುತ್ತದೆ. ಯಾವುದೋ ಉದ್ದೇಶದಿಂದ ಯಾರನ್ನೋ ಟೀಕೆ ಮಾಡುವಾಗ ಎಚ್ಚರದಿಂದಿರಬೇಕು ಎಂದ ಅವರು, ಚುನಾವಣೆ ಸಮೀಪಿಸುತ್ತಿದೆ. ನಾವು ಸಾಧನೆಯ ಹಿಂದೆ ಹೋಗುತ್ತಿದ್ದೇವೆ ಎಂದು ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್,ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್,ಮುಖಂಡರಾ ಆರ್.ಕೆ ಸಿದ್ರಾಮಣ್ಣ ಸೇರಿ ಹಲವರಿದ್ದರು.