ಸಾರಾಂಶ
ಧಾರವಾಡ:
ಬಸವಧರ್ಮ ಜಾತಿರಹಿತ ಧರ್ಮವಾಗಿದ್ದು, ಜಾಗತಿಕ ಧರ್ಮ ಆಗಬೇಕು. ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗಬೇಕು. ಇದನ್ನು ವೀರಶೈವ ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.ಇಲ್ಲಿಯ ಚನ್ನಬಸವೇಶ್ವರ ನಗರದಲ್ಲಿನ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕವು ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವಣ್ಣನವರು- ಚಿಂತನೆ ಹಾಗೂ ಲಿಂಗಾಯತ ಭವನದ ಎರಡನೇ ಮಹಡಿ'''''''' ಮಹಾದಾನಿ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಸಭಾಭವನ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಹಿತದೃಷ್ಟಿಯಿಂದ 1904ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು ಸೇರಿದಂತೆ ಹಲವಾರು ಮಹನೀಯರು ಮಹಾಸಭಾ ಹುಟ್ಟುಹಾಕಿದರು. ಸಮಾಜದ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಆ ಮಹನೀಯರ ಆಶಯಗಳನ್ನು ಈಡೇರಿಸುವತ್ತ ಪ್ರಾಮುಖ್ಯತೆ ಕೊಡಬೇಕಿದೆ ಎಂದರು.ಲಿಂಗಾಯತ ಒಳಪಂಗಡಗಳು ಒಂದಾದರೆ ಮಾತ್ರ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಒಳ ಪಂಗಡಗಳ ಮಧ್ಯೆ ನೆಂಟಸ್ತಿಕೆ ಬೆಳೆಯಬೇಕು. ಇದೇ ಉದ್ದೇಶ ವೀರಶೈವ ಲಿಂಗಾಯತ ಮಹಾಸಭಾದ್ದಾಗಿದೆ. ಅದು ಅನುಷ್ಠಾನ ಆಗಬೇಕು ಎಂದ ಅವರು, ಧಾರವಾಡದಲ್ಲಿ ಮಹಾಸಭಾದ ಮನವಿ ಅನ್ವಯ ಸಮಾಜದ ಮಕ್ಕಳಿಗೆ ವಸತಿ ನಿಲಯ ನಿರ್ಮಾಣಕ್ಕೆ ಭೂಮಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಪಂಡಿತರಾಧ್ಯ ಶಿವಾಚಾರ್ಯರು, ಶಾಲಾ-ಕಾಲೇಜುಗಳಲ್ಲಿ ಬಸವಾದಿ ಪರಂಪರೆಯ ವಚನಗಳನ್ನು ಪಠಿಸಲು ಸರ್ಕಾರ ಆದೇಶಿಸಬೇಕು. ಬಸವಣ್ಣನವರ ಎಲ್ಲ ಬೋಧನೆಗಳನ್ನು ಬಿಂಬಿಸುವ ಬಸವ ಭವನಗಳು ಎಲ್ಲೆಡೆ ನಿರ್ಮಾಣವಾಗಬೇಕು ಎಂದು ಹೇಳಿದರು.ವೈದಿಕ ಪರಂಪರೆ ತೊಲಗಿಸಲು, ಧರ್ಮಕ್ಕೆ ಹೊಸ ರೂಪಕೊಟ್ಟವರು ಬಸವಣ್ಣನವರು. ಧರ್ಮಕ್ಕೆ ಭಯ ಅಲ್ಲ ಭಕ್ತಿ ಸಾಕು ಎಂದು ಸಾರಿದ್ದರು. ಅವರು ಸಮಾಜಕ್ಕೆ ಕೊಟ್ಟಿದ್ದು ಅತಿ ಸರಳ ಬದುಕು. ಇಂತಹ ಬಸವಣ್ಣನವರ ಬೋಧಿಸಿದ ಮೌಲ್ಯಗಳ ಆಚರಣೆಯೇ ಸಾಂಸ್ಕೃತಿಕ ನಾಯಕ ಎಂದು ಕರೆದಿರುವುದಕ್ಕೆ ಸಾರ್ಥಕ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಬಸವಣ್ಣನವರು ಸಾರ್ವಕಾಲಕ್ಕೂ ಪ್ರಸ್ತುತ. ಅವರು ತೋರಿಸಿದ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು. ಲಿಂಗಾಯತ ಭವನದ ಮೊದಲ ಮಹಡಿಗೆ ತ್ಯಾಗ ವೀರ ಶಿರಸಂಗಿ ಲಿಂಗರಾಜರ ಹೆಸರಿಟ್ಟಿರುವುದು ಆ ಮಹಾನ ವ್ಯಕ್ತಿಗೆ ಸಲ್ಲಿಸಿದ ಅತಿ ದೊಡ್ಡ ಗೌರವ ಎಂದರು.ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿ ಮಾತನಾಡಿ, ಬಸವಣ್ಣನವರು ಬರೀ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸುಧಾರಣೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಅಪಾರ ಕನ್ನಡ ಭಾಷಾ ಪ್ರೇಮಿ ಆಗಿದ್ದರು. ಈ ಕಾರಣದಿಂದ ಅನ್ಯ ಪ್ರಾಂತ್ಯಗಳಿಂದ ಬಂದ ಶರಣರಿಗೂ ಕನ್ನಡ ಕಲಿಸಿ, ಕನ್ನಡದಲ್ಲಿ ವಚನ ರಚನೆಗೆ ಪ್ರೋತ್ಸಾಹಿಸಿದರು. ಸಮಾನತೆಯ ತಳಹದಿಯಲ್ಲಿ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಶ್ರಮಿಸಿದ ಸಾಮಾಜಿಕ ನಾಯಕ ಕೂಡ ಬಸವಣ್ಣ. ಆದರೆ, ಬಸವಣ್ಣನವರನ್ನು ಅರ್ಥೈಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು, ಅವರ ಸಂದೇಶಗಳನ್ನು ರಾಜ್ಯದ ಪ್ರತಿ ಹಳ್ಳಿಗೂ ತಲುಪಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ಚಿತ್ತರಗಿ ಗುರುಮಹಾಂತ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಶಿಮರದ ಅಧ್ಯಕ್ಷತೆ ವಹಿಸಿದ್ದರು. ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಎಸ್.ಬಿ. ಗೋಲಪ್ಪನವರ, ಶಿವಾನಂದ ಕವಳಿ, ಶಂಕರ ಕುಂಬಿ, ಬಿ.ಎಂ. ಸೂರಗೊಂಡ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ್, ಸಂಧ್ಯಾ ಅಂಬಡಗಟ್ಟಿ ಇದ್ದರು. ಬಿ.ವೈ. ಪಾಟೀಲ ಸ್ವಾಗತಿಸಿದರು. ಮಲ್ಲನಗೌಡ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿದ್ದಣ್ಣ ಕಂಬಾರ ನಿರೂಪಿಸಿದರು. ಶಿವಶರಣ ಕಲಬಶೆಟ್ಟರ ವಂದಿಸಿದರು. ಆರಂಭದಲ್ಲಿ ರತಿಕಾ ನೃತ್ಯ ನಿಕೇತನ ವಿದ್ಯಾರ್ಥಿಗಳು ವಚನ ನೃತ್ಯ ಪ್ರಸ್ತುತಪಡಿಸಿದರು.