ಅಡಕೆ ಬೆಳೆಗಾರರು ಎಲೆಚುಕ್ಕಿ ಮತ್ತು ಹಳದಿ ರೋಗದಂತಹ ತೀವ್ರ ರೋಗಬಾಧೆಗಳಿಂದ ಕಂಗಾಲಾಗಿದಲ್ಲದೇ ನಿರೀಕ್ಷಿತ ಇಳುವರಿ ಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಡಕೆ ಬೆಳೆಗಾರರು ಎಲೆಚುಕ್ಕಿ ಮತ್ತು ಹಳದಿ ರೋಗದಂತಹ ತೀವ್ರ ರೋಗಬಾಧೆಗಳಿಂದ ಕಂಗಾಲಾಗಿದಲ್ಲದೇ ನಿರೀಕ್ಷಿತ ಇಳುವರಿ ಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಗಾರರಿಗೆ ಅಗತ್ಯ ಸಾಲ ಸೌಲಭ್ಯ ನೀಡಿ ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.

ಇಲ್ಲಿಯ ಟಿಎಂಎಸ್ ಸಭಾಭವನದಲ್ಲಿ ಎಂ.ಎಂ. ಜೋಶಿ ಗಣೇಶ ನೇತ್ರಾಲಯ ಹಾಗೂ ಟಿ.ಎಂ.ಎಸ್. ಸಿದ್ದಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೇತ್ರದಾನವು ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ನಮ್ಮ ಜೀವಿತಾವಧಿಯ ನಂತರ ಮತ್ತೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನದ ಮಹತ್ಕಾರ್ಯವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ನಟ ಸಾರ್ವಭೌಮ ಡಾ. ರಾಜಕುಮಾರ್ ನೇತ್ರದಾನದ ಮೂಲಕ ಸಮಾಜಕ್ಕೆ ದೊಡ್ಡ ಮಾದರಿಯಾಗಿದ್ದಾರೆ ಎಂದು ನೆನೆದ ಅವರು, ಡಾ. ರಾಜ್ ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ತಗುಲಿರುವ ರೋಗಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಶಾಸಕರು ಎಲೆಚುಕ್ಕಿ ಮತ್ತು ಹಳದಿ ರೋಗದಿಂದಾಗಿ ರೈತರು ನಿರೀಕ್ಷಿತ ಬೆಳೆ ಹಾಗೂ ಆದಾಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಬೆಳೆಗಾರರು ತೀವ್ರ ಆರ್ಥಿಕ ನಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ರಕ್ಷಣೆಗೆ ಸಹಕಾರಿ ವಲಯ ಧಾವಿಸಬೇಕು. ಟಿ.ಎಂ.ಎಸ್ ನಂತಹ ಸಹಕಾರಿ ಸಂಸ್ಥೆಗಳು ರೈತರಿಗೆ ಉದಾರವಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಶಿಬಿರದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಂಡು ಸೌಲಭ್ಯ ಪಡೆದುಕೊಂಡರು.

ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ನ್ಯಾಯವಾದಿ ರವಿ ಹೆಗಡೆ ಹೂವಿನಮನೆ, ಲಯನ್ಸ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ, ಟಿ.ಎಂ.ಎಸ್. ನಿರ್ದೇಶಕರು, ಎಂ.ಎಂ. ಜೋಶಿ ಆಸ್ಪತ್ರೆಯ ನೇತ್ರ ತಜ್ಞರು ಹಾಗೂ ಸ್ಥಳೀಯ ಪ್ರಮುಖರಿದ್ದರು.

------

27ಎಸ್ಡಿಪಿ4- ಸಿದ್ದಾಪುರದಲ್ಲಿ ಟಿಎಂಎಸ್ ಹಾಗೂ ಎಂ.ಎಂ. ಜೋಶಿ ಗಣೇಶ ನೇತ್ರಾಲಯದ ಸಹಯೋಗದಲ್ಲಿ ಜರುಗಿದ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.