ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಶಿಕ್ಷಣದ ಜತೆ ಸಂಸ್ಕಾರವಂತರಾಗಿ ಗುರು-ಹಿರಿಯರು, ಪೋಷಕರಿಗೆ ಗೌರವ ತರುವ ರೀತಿಯಲ್ಲಿ ಬೆಳೆಯಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಐಕ್ಯುಎಸಿ ಅಡಿಯಲ್ಲಿ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ಕ್ರಾಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ, ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದ ನುರಿತ ಬೋಧಕರನ್ನು ನೇಮಿಸಿದ್ದೇವೆ. ಗ್ರಂಥಾಲಯ ಕಟ್ಟಲು 1 ಕೋಟಿ ರು. ಮಂಜೂರು ಮಾಡಿದ್ದೇನೆ. ಸ್ನಾತಕೋತ್ತರ ಕೇಂದ್ರ ಕಟ್ಟಲು ಈಗಲೇ 4 ಕೋಟಿ ರು. ಮಂಜೂರು ಮಾಡುತ್ತಿದ್ದೇನೆ ಎಂದು ಹೇಳಿದರು.ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಹಾಸ್ಟೆಲ್ಗಳನ್ನು ಕಟ್ಟಲಾಗಿದೆ. ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಗಳಿಸುವುದು ನಿಮ್ಮ ಕೆಲಸ. ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಜವಾಬ್ದಾರಿ. ಉಗ್ರರು ಪಹಲ್ಗಾಂನಲ್ಲಿ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡಿರುವುದಕ್ಕೆ ಪ್ರತಿಯಾಗಿ ನಮ್ಮ ಯೋಧರು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಅಡಗು ತಾಣಗಳನ್ನು ನಾಶಪಡಿಸಿ ಎಚ್ಚರಿಕೆ ನೀಡಿದ್ದಾರೆ. ಬಲಿಷ್ಠ ರಾಷ್ಟ್ರ ಕಟ್ಟುವುದು ನಿಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಶ್ರಾಂತ ನ್ಯಾಯಾಧೀಶರಾದ ಎಚ್.ಬಿಲ್ಲಪ್ಪ ಮಾತನಾಡಿ, ಪ್ರತಿಯೊಬ್ಬರು ಸುಂದರವಾದ ಜೀವನ ಕಟ್ಟಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ. ಜ್ಞಾನಕ್ಕಿಂತ ಮಿಗಿಲಾದುದು ಜೀವನದಲ್ಲಿ ಯಾವುದು ಇಲ್ಲ. ಜ್ಞಾನವೇ ಶಕ್ತಿ. ಸೌಕ್ಯವಾಗಿ ಸಮಾಜದಲ್ಲಿ ಜೀವಿಸಬೇಕಾದರೆ ಮೌಲ್ಯಯುತ ಶಿಕ್ಷಣ ಬೇಕು. ನಿಸ್ವಾರ್ಥವಾಗಿ ಜೀವಿಸಿ ಆಗ ಬದುಕು ಸುಂದರವಾಗಿರುತ್ತದೆ ಎಂದರು.ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಶಿವಮೂರ್ತಿನಾಯ್ಕ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಆರ್.ಎ.ಅಶೋಕ್, ಮಲ್ಲಿಕಾರ್ಜುನ ಸ್ವಾಮಿ, ಮುರುಗೇಶ್, ಮರುಳಸಿದ್ದಪ್ಪ, ಚೇತನ್ ಜೈನ್ ಹಾಗೂ ಬೋಧಕ-ಬೋಧಕೇತರ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.