ಸಾರಾಂಶ
ದೇಶಾಭಿಮಾನಿಗಳ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ ದೊರಕಿದೆ. ಅದನ್ನು ವಿಶ್ವದಲ್ಲಿಯೇ ಉನ್ನತ ಸ್ಥಾನಕ್ಕೇರಿಸುವ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರಮೇಲಿದೆ.
ಕನ್ನಡಪ್ರಭ ವಾರ್ತೆ ಚಡಚಣ
ದೇಶಾಭಿಮಾನಿಗಳ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ ದೊರಕಿದೆ. ಅದನ್ನು ವಿಶ್ವದಲ್ಲಿಯೇ ಉನ್ನತ ಸ್ಥಾನಕ್ಕೇರಿಸುವ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರಮೇಲಿದೆ. ದೇಶ ಪ್ರಗತಿ ಜೊತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಗಠಾಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಮಗ್ರ ಯೋಜನೆಗಳನ್ನು ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸುವುದಾಗಿ ತಿಳಿಸಿದರು.
ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ನಮ್ಮ ಹಿರಿಯರು ತಮ್ಮ ಸರ್ವಸ್ವವನ್ನು ನೀಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ನಾವೆಲ್ಲರೂ ನಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ದೇಶಸೇವೆ ಮಾಡಬೇಕು ಎಂದರು. ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಅರಳಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಚಡಚಣ ತಾಪಂ ಇಒ ಸಂಜಯ ಖಡಗೇಕರ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಮಲ್ಲು ಧೋತ್ರೆ, ಉಪಾಧ್ಯಕ್ಷ ಇಲಾಹಿ ನದಾಫ, ಪಪಂ ಸದಸ್ಯರು, ಮುಖ್ಯಾಧಿಕಾರಿ ಬಿ.ಕೆ.ತಾವಸೆ, ಸಿಪಿಐ ಸುರೇಶ ಬೆಂಡೆಗುಂಬಳ, ಗ್ಯಾರಂಟಿ ತಾಲೂಕು ಅಧ್ಯಕ್ಷ ರವಿದಾಸ ಜಾಧವ, ಹೆಸ್ಕಾಂ ಎಇಇ, ಬಿಇಒ, ಪಶು ಇಲಾಖೆಯ ಜೆಡಿ ಗಂಗನಳ್ಳಿ, ಸಿಡಿಪಿಒ ಜೂಂಜರವಾಡ ಸೇರಿ ಎಲ್ಲ ಅಧಿಕಾರಿಗಳು ಇದ್ದರು. ಧ್ವಜಾರೋಹಣದ ನಂತರ ಪೊಲೀಸ್ ಮತ್ತು ಎನ್ಸಿಸಿ ವಿದ್ಯಾರ್ಥಿಗಳಿಂದ ವಂದನೆ ಮತ್ತು ವಿವಿದ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.