ದೇಶ ಜಾತ್ಯತೀತ ರಾಷ್ಟ್ರವಾಗಬೇಕು, ಎಲ್ಲರಿಗೂ ಸಮಾನ ಬಾಳು, ಪ್ರತಿಯೊಬ್ಬರಿಗೂ ಕನಿಷ್ಠ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಮಾಜಿ ಶಾಸಕ ಮುಖ್ಯಮಂತ್ರಿ ಚಂದು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶ ಜಾತ್ಯತೀತ ರಾಷ್ಟ್ರವಾಗಬೇಕು, ಎಲ್ಲರಿಗೂ ಸಮಾನ ಬಾಳು, ಪ್ರತಿಯೊಬ್ಬರಿಗೂ ಕನಿಷ್ಠ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಮಾಜಿ ಶಾಸಕ ಮುಖ್ಯಮಂತ್ರಿ ಚಂದು ತಿಳಿಸಿದ್ದಾರೆ.ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತ ಯಾತ್ರಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ- ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಭಿನ್ನ ಜಾತಿ, ವಿಭಿನ್ನ ಸಂಸ್ಕೃತಿ, ವಿಭಿನ್ನ ಪದ್ಧತಿಯನ್ನು ಒಳಗೊಂಡ ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಆಗಲು ಸಾಧ್ಯನಾ? ಕೆಲವರು ಸಂವಿಧಾನವನ್ನೇ ಬದಲಾಯಿಸಬೇಕು ಎಂದು ಹೇಳುತ್ತಾರೆ. ಆದರೆ ಕಾಲಘಟ್ಟಕ್ಕೆ ತಕ್ಕಂತೆ ಸಂವಿಧಾನದಲ್ಲಿ ತಿದ್ದುಪಡಿಯನ್ನು ಮಾಡಬಹುದೇ ವಿನಃ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಇದೇ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಪಿ.ನಾಡಗೌಡ, ಅಂಕಣಕಾರ ಕೆ.ಎಸ್.ನಾಗರಾಜ್ ಅವರಿಗೆ ಶತಮಾನ ಗೌರವ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಪ್ರದಾನ ಕಾರ್ಯದರ್ಶಿ ಕೆ.ವಿ.ನಾಗರಾಜಮೂರ್ತಿ, ಚಲನಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಜರಿದ್ದರು.
ನಾನು ಶಾಸಕನಾಗಲು, ವಿಧಾನ ಪರಿಷತ್ ಸದಸ್ಯನಾಗಲು ಕಾರಣ ಈ ಪ್ರಜಾಪ್ರಭುತ್ವದ ಅಡಿಯಲ್ಲಿ, ಮೌಲ್ಯಾಧಾರಿತ ರಾಜಕಾರಣದ ಅಡಿಯಲ್ಲಿ, ರಾಮಕೃಷ್ಣ ಹೆಗಡೆ ಅವರ ನಾಯಕತ್ವದಲ್ಲಿ ಸಾಧ್ಯವಾಯಿತೇ ಹೊರತು, ಬೇರೆ ಸಾಧ್ಯವಿರಲಿಲ್ಲ. ನನಗೂ ರಾಜಕಾರಣಕ್ಕೂ ಸಂಬಂಧವೇ ಇಲ್ಲ. ಹಣ, ಜಾತಿ ಇಲ್ಲದೇ? ಇವತ್ತು ಯಾರಾದರೂ ಇಪ್ಪತ್ತು ದಿನಗಳಲ್ಲಿ ಶಾಸಕ ಆಗಲು ಸಾಧ್ಯ ಇದೆಯಾ? ಎಂದು ಪ್ರಶ್ನಿಸಿದರು.