ಜನಪದ ಸಾಹಿತ್ಯ ಜನತೆಗೆ ಮುಟ್ಟುವಂತಾಗಲಿ: ಅನ್ನದಾನೀಶ್ವರ ಸ್ವಾಮೀಜಿ

| Published : Dec 17 2024, 01:01 AM IST

ಜನಪದ ಸಾಹಿತ್ಯ ಜನತೆಗೆ ಮುಟ್ಟುವಂತಾಗಲಿ: ಅನ್ನದಾನೀಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ಸ್ವರೂಪದಲ್ಲಿ ಬೆಳೆದು ಬಂದಿರುವ ಜನಪದ ಸಾಹಿತ್ಯ ಬೆಳೆಯುವಂತಾಗಬೇಕು. ಕಾಲ ಎಷ್ಟೇ ಬದಲಾದರೂ ಜನಪದಕ್ಕೆ ಮಾತ್ರ ಇಂದು, ಮುಂದು ಎಂದೆಂದಿಗೂ ತನ್ನದೇ ಆದ ಬೆಲೆ ಇದ್ದೇ ಇರುತ್ತದೆ. ಅದನ್ನು ಉಳಿಸಿ, ಬೆಳೆಸಬೇಕು ಎಂದು ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಮುಂಡರಗಿ: ಜನಪದ ಸಾಹಿತ್ಯ ಬಹಳ ಪೂರ್ವಕಾಲದಿಂದ ಬಂದಿರುವಂಥದ್ದು. ಜನರಿಂದ ಬಂದಿದ್ದಂತಹ ಜನಪದ ಸಾಹಿತ್ಯ ಇಂದು ಜನತೆಗೆ ಮುಟ್ಟುವಂತಾಗಬೇಕು ಎಂದು ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಕ.ರಾ. ಬೆಲ್ಲದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ, ಶ್ರೀ ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವ ಅಂಗವಾಗಿ ರಾಷ್ಟ್ರೀಯ ಯೋಜನಾ ಘಟಕ ಸಾಂಸ್ಕೃತಿಕ ವೇದಿಕೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಸ್ವರೂಪದಲ್ಲಿ ಬೆಳೆದು ಬಂದಿರುವ ಜನಪದ ಸಾಹಿತ್ಯ ಬೆಳೆಯುವಂತಾಗಬೇಕು. ಕಾಲ ಎಷ್ಟೇ ಬದಲಾದರೂ ಜನಪದಕ್ಕೆ ಮಾತ್ರ ಇಂದು, ಮುಂದು ಎಂದೆಂದಿಗೂ ತನ್ನದೇ ಆದ ಬೆಲೆ ಇದ್ದೇ ಇರುತ್ತದೆ. ಅದನ್ನು ಉಳಿಸಿ, ಬೆಳೆಸಬೇಕು ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ರುದ್ರಪ್ಪ ಮಾತನಾಡಿ, ಜಾನಪದ ಎಂದರೆ ಕ್ರಿಯಾಮೂಲದಿಂದ, ಕಾಯಕದ ಶಕ್ತಿಯಿಂದ ಹುಟ್ಟಿರುವಂಥದ್ದು. ಜನಪದದ ಮೂಲ ಬೇರೆಂದರೆ ಅದು ನಮ್ಮ ಹಿರಿಯರು. ಜನಪದ ಗ್ರಾಮೀಣ ಜನರ ಹಾಸುಹೊಕ್ಕಾಗಿದೆ. ಆಯಾ ಪ್ರದೇಶಕ್ಕೆ ತಕ್ಕಂತೆ ಜನಪದಕ್ಕೆ ತನ್ನದೇ ಆದ ವಿಶೇಷತೆಗಳಿವೆ. ಅದರಲ್ಲಿಯೂ ನಮ್ಮ ಉತ್ತರ ಕರ್ನಾಟಕದಲ್ಲಿ ಜನಪದ ಸಾಹಿತ್ಯದ ಹಿರಿಮೆ, ಗರಿಮೆ ಇನ್ನೂ ಹೆಚ್ಚಿನ ಮಟ್ಟದಲ್ಲಿದೆ. ಯುವಕರಿಗೆ ಇಂತಹ ಸ್ಪರ್ಧೆಗಳು ಅವಶ್ಯವಾಗಿದ್ದು, ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಈ ಮಹಾವಿದ್ಯಾಲಯ ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ನೂತನ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಡಾ. ವೀರೇಶ ಹಂಚಿನಾಳ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿ ಸರ್ಕಾರದ ಆರೋಗ್ಯ ಇಲಾಖೆಯ ನಿಯಮದ ಪ್ರಕಾರ ಜ.ಅ. ವಿದ್ಯಾ ಸಂಸ್ಥೆಗೆ ಡಿ ಫಾರ್ಮ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ತರಲು ಪ್ರಯತ್ನಿಸುವುದಾಗಿ ಹೇಳಿದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿದರು.

ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಕರಬಸಪ್ಪ ಹಂಚಿನಾಳ, ಪ್ರಾಚಾರ್ಯ ಡಾ. ಡಿ.ಸಿ. ಮಠ, ಮಮತಾ ಉಪಸ್ಥಿತರಿದ್ದರು. ಡಾ. ಸಂತೋಷ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಚಿನ್‌ ಉಪ್ಪಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.