ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಓದುವುದು, ಸ್ಪಷ್ಟವಾಗಿ ಬರೆಯುವುದೇ ನಿಜವಾದ ಪರೀಕ್ಷೆ. ಯಾವುದೇ ಆತಂಕ ಪಡದೆ ಧೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಂತೆ ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಸಮೀಪದ ಪುರಗೇಟ್‌ ಛಾಯದೇವಿ ಭಾನುಪ್ರಕಾಶ್ ಪ್ರೌಢಶಾಲೆಯಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಶನ್ ಏರ್ಪಡಿಸಿದ್ದ ಪರೀಕ್ಷೆ ಭಯ ಬಿಡಿ, ಉಸಿರಿಗಾಗಿ ಗಿಡ ನೆಡಿಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊದಲಿನಂತೆ ಪರೀಕ್ಷೆ ಎಂದು ಭಯ ಪಡಬಾರದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಎಲ್ಲ ರೀತಿಯ ಓದಿನ ಸಾಮಗ್ರಿಗಳನ್ನು ಶಿಕ್ಷಣ ಇಲಾಖೆ, ಶಿಕ್ಷಕರು, ಶಾಲೆಗಳು ನೀಡುತ್ತಿವೆ. ಕಲಿಕಾ ಮಿತ್ರದಂತಹ ಉಪಯುಕ್ತ ಮಾಹಿತಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮೀಸಲಿದೆ ಎಂದರು.

ಬಿಇಒ ವೈ.ಕೆ.ತಿಮ್ಮೇಗೌಡರು ದಿನದ 24 ಗಂಟೆ ವಿದ್ಯಾರ್ಥಿಗಳ ಕಲಿಕೆ ಕುರಿತು ಪ್ರತಿ ಶಾಲೆಗೆ ಭೇಟಿ, ಮಾಹಿತಿ ಕಲೆ ಹಾಕಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಮಕ್ಕಳಿಗೆ ಪರಿಸರ ಪ್ರಜ್ಞೆ ಬಲು ಮುಖ್ಯ. ಇರುವ ಕಾಡು ನಾಡಿಗಾಗಿ ಬರಿದಾಗಿದೆ. ಐಷಾರಾಮಿ ಬದುಕಿಗೆ ಅರಣ್ಯ ನಾಶವಾಗುವುದನ್ನು ತಪ್ಪಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಮರಗಿಡ ಬೆಳೆಸಬೇಕು ಎಂದರು.

ಮರಗಿಡ, ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿದೆ. ಆದರೆ, ನಾವು ಪ್ರಕೃತಿ, ನಾಡಿಗೆ ಕೊಡುವ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಗಿಡ ಮರಗಳಿಗೆ ತಮ್ಮತಂದೆ ತಾಯಿ ಹೆಸರಿಟ್ಟು ಪೋಷಿಸಿದರೆ ಅವು ಹತ್ತಾರು ಜೀವಗಳಿಗೆ ಉಸಿರಾಗಲಿದೆ. ಇದು ನಾಡಿಗೆ ನೀವು ಕೊಡುವ ಅಮೂಲ್ಯ ಕೊಡುಗೆ ಎಂದು ವಿನಂತಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಮಾತನಾಡಿದರು. ಮಕ್ಕಳು ಕನ್ನಡ ಬಾವುಟ ಹಿಡಿದು ಕನ್ನಡ ಗೀತೆಗಳಿಗೆ ಸುಂದರ ಹೆಜ್ಜೆ ಹಾಕಿ, ನರ್ತಿಸಿದರು. ಶ್ರೀನಿವಾಸ್ ಉಡುಪ, ಮುಖ್ಯಶಿಕ್ಷಕಿ ಸವಿತಾರಮೇಶ್, ಶಿಕ್ಷಕ ಸಮೂಹ ಹಾಜರಿದ್ದರು.