ಕುವೆಂಪು ಸಾಹಿತ್ಯ ಯುವಕರಿಗೆ ಪ್ರೇರಣೆ ನೀಡಲಿ- ಶ್ರೀನಿವಾಸ ನರಗುಂದ

| Published : Dec 31 2023, 01:30 AM IST / Updated: Dec 31 2023, 01:31 AM IST

ಕುವೆಂಪು ಸಾಹಿತ್ಯ ಯುವಕರಿಗೆ ಪ್ರೇರಣೆ ನೀಡಲಿ- ಶ್ರೀನಿವಾಸ ನರಗುಂದ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಕವಿ ಕುವೆಂಪು ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಕನ್ನಡ ವಿಶ್ವಕನ್ನಡವಾಗಿ ಮಾನ್ಯವಾಗಬೇಕು ಎಂಬ ಅವರ ಸಂಕಲ್ಪ ಸಾಕಾರಗೊಳ್ಳುವಲ್ಲಿ ಎಲ್ಲರ ಪ್ರಯತ್ನ ಅವಶ್ಯ ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಸಾಹಿತ್ಯಕ್ಕೆ ಕುವೆಂಪು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ಅವರ ಸಾಹಿತ್ಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡು-ನುಡಿಯ ವರ್ಣನೆ ಅವರ ಹಲವು ಕವನಗಳಲ್ಲಿ ಕಾಣುತ್ತೇವೆ. ಕನ್ನಡದ ಬಗೆಗಿನ ಅವರ ಚಿಂತನೆ ಹಾಗೂ ಕಳಕಳಿ ಯುವಜನತೆ ಅರಿಯಬೇಕು. ಕನ್ನಡ ವಿಶ್ವಕನ್ನಡವಾಗಿ ಮಾನ್ಯವಾಗಬೇಕು ಎಂಬ ಅವರ ಸಂಕಲ್ಪ ಸಾಕಾರಗೊಳ್ಳುವಲ್ಲಿ ಎಲ್ಲರ ಪ್ರಯತ್ನ ಅವಶ್ಯ ಎಂದರು.

ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸಿದ ಕುವೆಂಪು ಕನ್ನಡಕ್ಕೆ ಹೊಸ ಪರಿಭಾಷೆ ನೀಡಿದರು. ಇಂತಹ ಸಂಗತಿಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಇಂತಹ ಶ್ರೇಷ್ಠ ಸಾಹಿತಿಗಳ ಬದುಕು-ಬರಹ ಯುವ ಸಮುದಾಯದಲ್ಲಿ ಪೂರಕ ಬದಲಾವಣೆ ತಂದು ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಲಿ ಎಂದರು.

ಉಪನ್ಯಾಸಕಿ ಭುವನೇಶ್ವರಿ ಟೊಂಗಳೆ ಮಾತನಾಡಿ, ಕುವೆಂಪು ಅವರ ಕಾವ್ಯದಲ್ಲಿ ಕನ್ನಡ ಭಾಷೆ, ಪ್ರಕೃತಿ ಮತ್ತು ಮಾನವ ಪ್ರೀತಿ ಕಾಣುತ್ತೇವೆ. ಕನ್ನಡ ಸಾಹಿತ್ಯಕ್ಕೆಅವರು ನೀಡಿದ ಕೊಡುಗೆಯನ್ನು ವಿದ್ಯಾರ್ಥಿಗಳು ಮೆಲುಕು ಹಾಕಬೇಕು ಎಂದರು.

ಅನೇಕ ವಿದ್ಯಾರ್ಥಿಗಳು ಕುವೆಂಪು ವಿರಚಿತ ಕವನ ವಾಚನ ಮಾಡಿ ಅವರ ಸಾಹಿತ್ಯ ಸೇವೆ ಸ್ಮರಿಸಿದರು. ದಿವ್ಯಶ್ರೀ ಬಿಲ್ಲಾರ ಪ್ರಾರ್ಥಿಸಿದರು. ಕೀರ್ತಿದಾಸರ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಎಚ್.ಎಸ್. ಗಿಡಗಂಟಿ ವಂದಿಸಿದರು.