ಶಿಕ್ಷಣ, ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸದಿಂದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ
ಕುಷ್ಟಗಿ: ಮಹಿಳೆಯರು ಸಮಾಜದ ಶಕ್ತಿ ,ಮಹಿಳೆಯರನ್ನು ಗೌರವಿಸುವ ಜತೆಗೆ ಅಭಿವೃದ್ಧಿಗೆ ಬೆಂಬಲಿಸುವ ಕಾರ್ಯವಾಗಬೇಕಿದೆ ಎಂದು ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಶುಕಮುನಿ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಪಿಕೆ ಫೌಂಡೇಶನ್, ಶ್ರೀದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಸಂಘ, ದೋಟಿಹಾಳ ಗ್ರಾಪಂ ಹಾಗೂ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸೀಮಂತ ಕಾರ್ಯಕ್ರಮ, ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಶಿಕ್ಷಣ, ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸದಿಂದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳೆಯರಿಗೆ ಶಿಕ್ಷಣ, ಉದ್ಯೋಗಾವಕಾಶಗಳಲ್ಲಿ ಸಮಾನವಕಾಶ ನೀಡಬೇಕು.ಮಹಿಳೆಯರು ವೃತ್ತಿ ಜೀವನದಲ್ಲಾಗಲೀ, ಇತರ ರಂಗಗಳಲ್ಲಾಗಲಿ ಅವಕಾಶಗಳು ಬಂದಾಗ ಕೀಳರಿಮೆಯಿಂದ ಹಿಂದೆ ಸರಿಯದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಹೆಜ್ಜೆ ಹಾಕಬೇಕಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಕುಟುಂಬದಿಂದ ರಾಷ್ಟ್ರ ನಿರ್ಮಾಣದವರೆಗೂ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಪುರುಷರಂತೆ ಮಹಿಳೆಯರು ಕೂಡ ಎಲ್ಲ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಉಪಪ್ರಾಂಶುಪಾಲ ಡಿ.ಸುರೇಶ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ತೊಡಗಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಮಹಿಳೆ ಮಗಳಾಗಿ, ಸಹೋದರಿಯಾಗಿ, ಬಾಳ ಸಂಗಾತಿಯಾಗಿ, ತಾಯಿಯಾಗಿ, ಅತ್ತೆ, ಅಜ್ಜಿಯಾಗಿ ಹಂತ ಹಂತವಾಗಿ ಎಲ್ಲ ಪಾತ್ರಗಳನ್ನು ಸಂತಸದಿಂದ ನಿರ್ವಹಿಸುತ್ತಾರೆ. ಇದರೊಂದಿಗೆ ತಮಗೆ ಎದುರಾಗುವ ಸವಾಲು ಎದುರಿಸಿ ಮುನ್ನುಗ್ಗಿದರೆ ಸಮೃದ್ಧಿ ಹಾಗೂ ಯಶಸ್ಸಿನ ಜೀವನ ನಡೆಸಬಹುದು, ಸಮಾಜಕ್ಕೆ ಉತ್ತಮ ದಾರಿದೀಪ ಆಗಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ನಿಂಗಪ್ಪ ಸಜ್ಜನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ರಾಜ್ಯಮಟ್ಟದ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಲಲೀತಮ್ಮ ಹಿರೇಮಠ, ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ, ಚುಸಾಪ ತಾಲೂಕಾಧ್ಯಕ್ಷ ಮಹೇಶ ಹಡಪದ, ಶಾರದಾ ಶೆಟ್ಟರ್, ಗೌರಮ್ಮ ಕುಡತಿನಿ, ಅನಿತಾ ಗೋಗಿ, ಅಡಿವೆಮ್ಮ ಹಿರೇಮಠ, ಉಮಾಪತಿ ಮಾಳಗಿ, ನಾಗರಾಜ ಕಾಳಗಿ, ಪರಶಿವಮೂರ್ತಿ ಮಾಟಲದಿನ್ನಿ, ಸಂಗಮೇಶ ಲೂತಿಮಠ ಸೇರಿದಂತೆ ಅನೇಕರು ಇದ್ದರು. ಇದೆ ಸಂದರ್ಭದಲ್ಲಿ 11 ಜನ ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.ಪ್ರಶಸ್ತಿ ಪುರಸ್ಕೃತರು:
ವಂದನಾ ಗೋಗಿ, ರೇಣುಕಾ ಚಳ್ಳಾರಿ, ನಿಂಗಮ್ಮ ವಾಲಿಕಾರ, ಅಕ್ಕಮಹಾದೇವಿ ಗೋತಗಿ, ಶಾರದಾ ಚಟ್ಟೇರ, ಭಾರತಿ ಭಟ್,ಮೀನಾಕ್ಷಿ ಪತ್ತಾರ ಸೇರಿದಂತೆ ಇತರರಿಗೆ ಕಿತ್ತೂರರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ವಿತರಿಸಲಾಯಿತು. ಡಿ ಸುರೇಶ, ಚನ್ನಬಸವ ಕೊಟಗಿ, ಶೇಖರ್ ಹೊಗರಿ, ನಾಗರಾಜ ರೆಡ್ಡಿ, ಪ್ರಭು ಜಹಗೀರದಾರ, ವಿಜಯ ಮಹಾಂತೇಶ, ಜಗನ್ನಾಥ ಕೆಂಧೂಳಿ, ರೇಷ್ಮಾ ಕಂದಕೂರ ಸೇರಿದಂತೆ ಇತರರಿಗೆ ಅಭಿನವ ಗವಿಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.