ಸಾರಾಂಶ
ಕೊಂಕಣಿಗರು ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಹಾಗೂ ಸಾಧನೆಯನ್ನು ಮಾಡಿದ್ದಾರೆ ಎಂದು ಡಾ. ಎನ್.ಕೆ. ನಾಯಕ ತಿಳಿಸಿದರು.
ಕುಮಟಾ: ಕೊಂಕಣಿ ಭಾಷೆಯ ಮೇಲೆ ಇತರ ಭಾಷೆಯ ಪ್ರಭಾವವಿದ್ದರೂ ಕುಮಟಾ ಭಾಗದಲ್ಲಿ ಅನೇಕ ಸಮಾಜದವರು ಕೊಂಕಣಿ ಮಾತನಾಡುತ್ತಾರೆ. ಇವರೆಲ್ಲರನ್ನು ಒಂದುಗೂಡಿಸುವ ಕಾರ್ಯವಾಗಬೇಕಾಗಿದೆ ಎಂದು ಡಾ. ಬಾಳಿಗಾ ಕಾಲೇಜು ಪ್ರಾಚಾರ್ಯ ಡಾ. ಎನ್.ಕೆ. ನಾಯಕ ತಿಳಿಸಿದರು.
ರೋಟರಿ ಸಭಾಭವನದಲ್ಲಿ ಮಂಗಳವಾರ ಕೊಂಕಣಿ ಪರಿಷತ್ ಕುಮಟಾ ವತಿಯಿಂದ ಹಮ್ಮಿಕೊಂಡಿದ್ದ ಕೊಂಕಣಿ ಮಾನ್ಯತಾ ದಿವಸ ಉದ್ಘಾಟಿಸಿ ಮಾತನಾಡಿ, ಕೊಂಕಣಿಗರು ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಹಾಗೂ ಸಾಧನೆಯನ್ನು ಮಾಡಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಂಕಣಿ ಪರಿಷತ್ ಅಧ್ಯಕ್ಷ ಅರುಣ ಉಭಯಕರ ಮಾತನಾಡಿ, ಅನೇಕ ವರ್ಷಗಳಿಂದ ಕುಮಟಾದಲ್ಲಿ ಕೊಂಕಣಿ ಪರಿಷದ್ ಕಾರ್ಯ ನಿರ್ವಹಿಸುತ್ತಿದ್ದು, ಕೊಂಕಣಿಗೆ ಸಂಬಂಧಿಸಿದ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಕುಮಟಾದಲ್ಲಿ ಸಂಘಟಿಸಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಯುವಜನತೆ ಕೊಂಕಣಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದರು. ಕೊಂಕಣಿ ಪರಿಷತ್ ಕಾರ್ಯದರ್ಶಿ ನಿರ್ಮಲಾ ಪ್ರಭು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಪ್ರಯುಕ್ತ ನಡೆಸಲಾದ ಕೊಂಕಣಿ ಕತೆ ಹೇಳುವ ಸ್ಪರ್ಧೆಯಲ್ಲಿ ಸಮೀಕ್ಷಾ, ಪನ್ನಗ, ಸ್ವಯಂ ಅನುಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಇದೇ ರೀತಿ ಹೈಸ್ಕೂಲ್ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಅನಘಾ ಪೈ, ಸುಹಾಸಿನಿ ಪೈ, ಸ್ಮೃತಿ ಶೇಟ್, ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಅಮೂಲ್ಯ, ಮಹಾಲಕ್ಷ್ಮಿ, ಗೌತಮ ಜಿ. ಭಟ್, ಮಹಿಳೆಯರಿಗಾಗಿ ನಡೆದ ಹಬ್ಬದ ಆಚರಣೆಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರದ್ಧಾ ಶಶಿಕಾಂತ, ಗೌರಿ ಕೋಟಿ, ಸುರೇಖಾ ಆರ್. ಬಾಳಗಿ ಅನುಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು.ಸಿಎ ಪರೀಕ್ಷೆಯಲ್ಲಿ ಸಾಧನೆಗೈದ ಶ್ರೀನಿಧಿ ರವಿಕಾಂತ ಕಾಮತ ಹಾಗೂ ವೆಂಕಟೇಶ ನಾಗೇಶ ಪ್ರಭು ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಅಕ್ಷತಾ, ಶ್ರೀಕೃಷ್ಣ, ತಿಲಕ್ ಅವರನ್ನು ಗೌರವಿಸಲಾಯಿತು.
ವನಿತಾ ನಾಯಕ ಸ್ವಾಗತಿಸಿದರು. ದೀಪಾ ನಾಯಕ, ದೀಪಾ ವಿನಾಯಕ ನಿರೂಪಿಸಿದರು. ಉಪಾಧ್ಯಕ್ಷ ಎಂ.ಬಿ. ಪೈ ವಂದಿಸಿದರು. ಪರಿಷತ್ ಸದಸ್ಯರಾದ ವಿನೋದ ಪ್ರಭು, ಪ್ರೊ. ಆನಂದ ನಾಯಕ, ಎಂ.ಕೆ. ಶಾನಭಾಗ ಇತರರು ಇದ್ದರು. ಬಳಿಕ ವಿದುಷಿ ನಯನಾ ಪ್ರಭು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.