ಸಾರಾಂಶ
ವಿಜಯಪುರ: ಹಳೆಯ ಆಚಾರಗಳಿಗೆ ಆಧುನಿಕ ವಿಚಾರಗಳನ್ನು ಸೇರಿಸಿದರೆ ಸಂಶೋಧನೆಯಲ್ಲಿ ಹೊಸ ದಾರಿ ಕಾಣಬಹುದು ಎಂದು ಬಿಎಲ್ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ ಹೇಳಿದರು.
ನಗರದಲ್ಲಿನ ಬಿಎಲ್ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಅನುಸಂಧಾನ-2024 ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಭಾರತದ ಸಸ್ಯ ಸಂಪತ್ತು ಅತ್ಯದ್ಭುತ್ವಾಗಿದೆ. ಸಮಸ್ತ ಮನುಕುಲಕ್ಕೆ ಅದರ ಮಹತ್ವ ತಿಳಿಸುವುದು ಭಾವಿ ವೈದ್ಯ ಸಂಶೋಧಕರ ಜವಾಬ್ದಾರಿಯಾಗಿದೆ ಎಂದರು.ಗದಗ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಸಂತೋಷ ಬೆಳವಡಿ ಮಾತನಾಡಿ, ಈಗ ಕಾಲಕಾಲಕ್ಕೆ ಸಂಶೋಧನೆ ಕುರಿತು ವಿಚಾರ ಸಂಕಿರಣಗಳು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಆಧುನಿಕ ಯುಗಕ್ಕೆ ತಕ್ಕಂತೆ ಭಾರತದ ಮೂಲ ಮತ್ತು ಪುರಾತನ ವಿಜ್ಞಾನವನ್ನು ಸೇರಿಸಿ ಹೊಸ ತಂತ್ರಜ್ಞಾನ ಆಧಾರಿತ ವನಸ್ಪತಿ ದ್ರವ್ಯಗಳ ಸಂಶೋಧನೆ ನಡೆಸಬೇಕು ಎಂದರು.ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾತನಾಡಿದರು. ಈ ಅನುಸಂಧಾನ ವಿಚಾರ ಸಂಕಿರಣದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ವಿವಿಧ ಆಯುರ್ವೇದ, ಯುನಾನಿ, ಫಾರ್ಮಸಿ, ನರ್ಸಿಂಗ್ ವಿಭಾಗಗಳ ಸ್ನಾತಕೋತ್ತರ ಹಾಗೂ ಪಿಎಚ್ಡಿ ವಿದ್ಯಾರ್ಥಿಗಳು ಸೇರಿದಂತೆ 150 ಕ್ಕೂ ಹೆಚ್ಚು ಸಂಶೋಧಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆಯೋಜಕ ಡಾ.ಸತೀಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಜೋತ್ಸನಾ ಮತ್ತು ಡಾ.ಪರಮೇಶ್ವರಿ ನಿರೂಪಿಸಿದರು.