ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎನ್ನುವ ಕವಿ ವಾಣಿಯೆಂತೆ ಕನ್ನಡವನ್ನು ಅಪ್ಪಿಕೊಂಡು ಕನ್ನಡದ ವಿದ್ವಾಂಸರು ಧಾರವಾಡವನ್ನು ಭಾರತದ ಚರಿತ್ರೆಯಲ್ಲಿ ದಾಖಲಿಸಿದ್ದಾರೆ.
ಧಾರವಾಡ:
ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಪ್ರಗತಿಯಲ್ಲಿ ಧಾರವಾಡದ ಪಾಲು ಬಹುದೊಡ್ಡದು ಎಂದು 12ನೇ ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ರೊಟ್ಟಿಗವಾಡ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಹೇಳಿದರು.ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎನ್ನುವ ಕವಿ ವಾಣಿಯೆಂತೆ ಕನ್ನಡವನ್ನು ಅಪ್ಪಿಕೊಂಡು ಕನ್ನಡದ ವಿದ್ವಾಂಸರು ಧಾರವಾಡವನ್ನು ಭಾರತದ ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಕನ್ನಡಿಗರ ಮನಸಿನಲ್ಲಿ ಪ್ರೀತಿಯಿಂದ ರೂಪಗೊಂಡ ಏಕೀಕರಣ ಹೋರಾಟವು ಅಖಂಡ ಕನ್ನಡ ನಾಡಿನ ಕನಸನ್ನು ನನಸಾಗಿದ್ದು ಸಹ ಧಾರವಾಡ ನೆಲದಲ್ಲಿ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಮತ್ತು ಹಚ್ಚೇವು ಕನ್ನಡದ ದೀಪ ಎಂದು ಕನ್ನಡಿಗರ ಎದೆಯಲ್ಲಿ ಕನ್ನಡದ ದೀಪ ಹಚ್ಚಿದವರು ಧಾರವಾಡದ ಕವಿಗಳು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಇಂಗ್ಲಿಷ್ ಹಾಗೂ ಇತರೆ ಭಾಷೆಗಳ ವ್ಯಾಮೋಹದಿಂದ ಕನ್ನಡಿಗರು ಮಾತೃಭಾಷೆ ಕಡೆಗಣಿಸುತ್ತಿದ್ದಾರೆ. ಇದಾಗದೇ ಕನ್ನಡ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕನ್ನಡವನ್ನು ಪ್ರೀತಿಸಬೇಕು. ಓದಿ ಬರೆಯಬೇಕು. ಆಡಳಿತ ಸರ್ಕಾರಗಳು ಸಹ ಮಾತೃ ಭಾಷೆ ಬಗ್ಗೆ ಕೆಲವು ಕಠಿಣ ನಿಯಮ ಜಾರಿ ಮಾಡಬೇಕೆಂದು ಡಾ. ರೊಟ್ಟಿಗವಾಡ ಆಗ್ರಹಿಸಿದರು. ನಿರ್ಣಯಗಳು1. ರಾಜ್ಯದಲ್ಲಿ ಯಾವುದೇ ಮಾಧ್ಯಮದ ಶಾಲೆಯಾದರೂ ಏಳನೇ ತರಗತಿ ವರೆಗೆ ಕಡ್ಡಾಯವಾಗಿ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು.2. ಯಾವುದೇ ಕಾರಣಕ್ಕೂ ಕನ್ನಡದ ಶಾಲೆಗಳನ್ನು ಮುಚ್ಚಬಾರದು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಿಕೊಳ್ಳಬೇಕು.3. ರಾಜ್ಯದ ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಬೇಕು ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.