ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಲಿ: ಶ್ರೀರಾಮುಲು

| Published : Sep 08 2025, 01:01 AM IST

ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಲಿ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಹಾಗೂ ಕುಟುಂಬ ಸಮೇತ ನಾಟಕ ಪ್ರದರ್ಶನ ವೀಕ್ಷಿಸುವಂಥ ಕಥಾವಸ್ತು ಸಾಮಾಜಿಕ ನಾಟಕಗಳಲ್ಲಿ ಇರಬೇಕಿದೆ.

ಬಳ್ಳಾರಿ, ಚಿತ್ರದುರ್ಗ, ದಾವಣೆಗೆ ಜಿಲ್ಲೆಗಳ ನಾಟಕ ರಚನೆಕಾರರ ಸಂಘದ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಹಾಗೂ ಕುಟುಂಬ ಸಮೇತ ನಾಟಕ ಪ್ರದರ್ಶನ ವೀಕ್ಷಿಸುವಂಥ ಕಥಾವಸ್ತು ಸಾಮಾಜಿಕ ನಾಟಕಗಳಲ್ಲಿ ಇರಬೇಕಿದೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.

ಪಟ್ಟಣದ ಆಜಾದ್ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ನಾಟಕ ಬರಹಗಾರರ (ಕವಿಗಳ) ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಜಯನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ನಾಟಕ ರಚನೆಕಾರರ ಸಂಘ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು. ಹಿಂದೆಲ್ಲ ಹಳ್ಳಿಗಳಲ್ಲಿ ನಾಟಕಗಳೇ ಮನರಂಜನೆ ನೀಡುತ್ತಿದ್ದ ಮಾಧ್ಯಮವಾಗಿದ್ದವು. ಇಂದಿನ ಕವಿಗಳು ಸದಭಿರುಚಿಯ ಹಾಗೂ ಸಮಾಜವನ್ನು ಒಗ್ಗೂಡಿಸುವ, ಸರಿದಾರಿಗೆ ಕೊಂಡೊಯ್ಯುವಂಥ ನಾಟಕಗಳ ರಚನೆಗೆ ಮುಂದಾಗಲಿ ಎಂದರಲ್ಲದೆ, ಸರ್ಕಾರ ನಾಟಕ ರಚನೆಕಾರರಿಗೆ ಸೌಲಭ್ಯ ಕಲ್ಪಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಲೇಖಕ ಭೀಮಣ್ಣ ಗಜಾಪುರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಮರಿಯಮ್ಮನಹಳ್ಳಿ ನಾಗರತ್ನಮ್ಮ, ಕರ್ನಾಟಕ ರಾಜ್ಯ ನಾಟಕ ರಚನೆಕಾರರ ಸಂಘದ ರಾಜ್ಯಾಧ್ಯಕ್ಷ ಶಂಕರ್ ಜಿ. ಹೂವಿನ ಹಿಪ್ಪರಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಡಗೇರ ಮಾತನಾಡಿದರು. ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜ, ಕಾನಮಡುಗು ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು ಸಾನ್ನಿಧ್ಯ ಹಾಗೂ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಅಧ್ಯಕ್ಷತೆ ವಹಿಸಿದ್ದರು. ನಾಟಕ ಬರಹಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಮೊಗಲಹಳ್ಳಿ ನಾಗರಾಜ, ಅಮರಪ್ಪ ಬುರಡಿ, ಕೋಶಾಧ್ಯಕ್ಷ ಗುರುರಾಜ ಸೋಮಣ್ಣ, ರಂಗಭೂಮಿ ಕಲಾವಿದರಾದ ಬಿ.ಜಿ. ಕೆರೆ ಉಪ್ಪಿ, ಹಾರಕಬಾವಿ ಡಾ. ಸಿ.ಮಹಲಿಂಗಪ್ಪ, ಕಲಾವಿದೆಯರಾದ ಕೆ.ದುರುಗಮ್ಮ, ಅಂಜಿನಮ್ಮ, ಗೌರಮ್ಮ, ದಿವ್ಯಾಕುಮಾರಿ, ಬ್ಲಾಕ್ ಸುಮಾ, ವೈಟ್ ಸುಮಾ, ದಾವಣಗೆರೆ ನಾಗವೇಣಿ, ತುಮಕೂರು ವೀಣಾ, ಚಿತ್ರದುರ್ಗ ಲಾವಣ್ಯಾ, ರಾಯದುರ್ಗ ನೇಸರ, ಮುಖಂಡರಾದ ಡಾಣಿ ರಾಘವೇಂದ್ರ, ಹಡಗಲಿ ವೀರಭದ್ರಪ್ಪ, ಸಂಗೀತ ನಿರ್ದೇಶಕರಾದ ಕಂಪಳದೇವರಹಟ್ಟಿ ನಾಗರಾಜ, ಕಾನಮಡುಗು ಕರಿಯಪ್ಪ, ಇಮಡಾಪುರ ಕುಮಾರಸ್ವಾಮಿ ಸೇರಿ ಇತರರಿದ್ದರು. ರಂಗಭೂಮಿ ಕಲಾವಿದರು, ಹಿನ್ನೆಲೆ ಗಾಯಕರು, ವಸ್ತ್ರವಿನ್ಯಾಸಕರು, ಡ್ರಾಮಾ ಸೀನರಿ ಮಾಲೀಕರು ಸೇರಿ ಕಲಾವಿದರನ್ನು ಸನ್ಮಾನಿಸಲಾಯಿತು.

ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿ

ಎಲ್ಲಾ ಕ್ಷೇತ್ರದ ಸಾಧಕರನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸಮಾಜದ ಓರೆ, ಕೋರೆಗಳನ್ನು ತಿದ್ದುವ ನಿಟ್ಟಿನಲ್ಲಿ ಸಾಮಾಜಿಕ ನಾಟಕ ಬರೆಯುವಂಥ ನಾಟಕ ರಚನೆಕಾರರನ್ನು ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಂಕರ ಜಿ.ಹೂವಿನ ಹಿಪ್ಪರಗಿ ಒತ್ತಾಯಿಸಿದರು. ಒಬ್ಬೊಬ್ಬರು 10ರಿಂದ 40 ನಾಟಕ ರಚಿಸಿದ್ದಾರೆ. ಸರ್ಕಾರ ಇಂಥ ನಾಟಕ ರಚನೆಕಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ ಎಂದರು.