ಸಾರಾಂಶ
ಕನ್ನಡಪ್ರಭ ವಾರ್ತೆ ಮಾನ್ವಿ
ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಅಯೋಧ್ಯೆಯಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡಿದರೆ ಸಾಲದು, ಪ್ರತಿಯೊಬ್ಬ ಮಕ್ಕಳಲ್ಲಿಯೂ ರಾಮನನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಉಡುಪಿ ಪೇಜಾವರ ಅದೋಕ್ಷಜ ಮಠಾಧೀಶರಾದ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.ಪಟ್ಟಣದ ಜಗನ್ನಾಥ ದಾಸರ ಸನ್ನಿಧಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿ, ಹಿಂದೂ ಸಮಾಜ ಉಳಿದರೆ ಮಾತ್ರ ರಾಮಮಂದಿರ ಉಳಿಯುವುದಕ್ಕೆ ಸಾಧ್ಯ. ಅಯೋಧ್ಯೇಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾತ್ರ ನಮ್ಮ ಮುಖ್ಯ ಉದ್ದೇಶವಲ್ಲ, ಇದರ ಜೊತೆಗೆ ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದು ಸಹ ಸೇರಿದೆ. ಶ್ರೀರಾಮ ಮಂದಿರದ ಕನಸು ನನಸು ಮಾಡಲಾಗಿದ್ದು, ಇದೀಗ ರಾಮರಾಜ್ಯದ ಕನಸು ನನಸು ಮಾಡುವುದಕ್ಕೆ ದೇಶದ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಿಕೊಡುವ ಸಂಕಲ್ಪ ಮಾಡಲಾಗಿದ್ದು, ಎಲ್ಲರ ಸಹಕಾರದಿಂದ ಉಡುಪಿಯಲ್ಲಿ ಮನೆಯಿಲ್ಲದವರಿಗೆ ಮನೆ ಕಟ್ಟಿ ಹಸ್ತಾಂತರಿಸುವುದರ ಮುಖಾಂತರ ನಿಜವಾದ ರಾಮರಾಜ್ಯದ ಕನಸನ್ನು ನನಸು ಮಾಡುತ್ತಿದೇವೆ ಎಂದು ಶ್ರೀಗಳು ನುಡಿದರು.
ಈ ವೇಳೆ ಮಾನ್ವಿ, ಸಿರವಾರದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಪದಾಧಿಕಾರಿಗಳು, ಸದಸ್ಯರು, ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು, ವಿಪ್ರ ಸಮಾಜದ ಬಾಂಧವರು ಭಾಗವಹಿಸಿದ್ದರು.ಅದ್ಧೂರಿ ಸ್ವಾಗತ:ಮಾನ್ವಿ ಪಟ್ಟಣಕ್ಕೆ ಆಗಮಿಸಿದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪಟ್ಟಣದ ದ್ಯಾನ ಮಂದಿರದಿಂದ ನೂರಾರು ಯುವಕರು ಬೈಕ್ ರ್ಯಾಲಿ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ಶ್ರೀ ಜಗನ್ನಾಥ ದಾಸರ ಸನ್ನಿಧಾನಕ್ಕೆ ಸ್ವಾಗತಿಸಿದರು. ಪಟ್ಟಣದ ಹೋರವಲಯದ ವ್ಯಾಸರಾಯ ಪ್ರತಿಷ್ಠಾಪಿತ ಸಂಜೀವರಾಯ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ಸಂಜೀವರಾಯನ ದರ್ಶನ ಪಡೆದು ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ಶ್ರೀ ವಿಜಯದಾಸರ ಕಟ್ಟೆ ದರ್ಶಿಸಿದರು.