ಸಾರಾಂಶ
ಗ್ರಾಮೀಣ ಭಾಗದ ಮಹಿಳೆಯರೂ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಬೇಕು
ಗದಗ: ಮಹಿಳೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು. ಅಂದಾಗ ಮಾತ್ರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಯೋಗೇಶ ಎ. ಹೇಳಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನಡೆದ ಶಿವಾನಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಹಾಗೂ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಮಹಿಳೆ ಅಬಲೆ ಅಲ್ಲ, ಸಬಲೆ. ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಹೀಗೆ ಸರ್ವ ರಂಗದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಹೀಗಾಗಿ, ಗ್ರಾಮೀಣ ಭಾಗದ ಮಹಿಳೆಯರೂ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಬೇಕು ಎಂದರು.ಕೊಪ್ಪಳ ಪ್ರಾದೇಶಿಕ ಕಚೇರಿ ಜ್ಞಾನ ವಿಕಾಸದ ಯೋಜನಾಧಿಕಾರಿ ಸುಧಾ ಗಾಂವಕರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಹೇಮಾವತಿ ಹೆಗ್ಗಡೆ ಅಮ್ಮನವರ ಕನಸಿನ ಕೂಸು. ಹೀಗಾಗಿ, ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಸಬಲತೆ ಸಾಧಿಸಬೇಕು ಎಂದರು.
ಈ ವೇಳೆ ಗದಗ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ ಹಾಗೂ ಆಸೇಟ್ ಉಪನ್ಯಾಸಕ ಸಂಘಗಳ ನಿರ್ವಹಣೆ ಹಾಗೂ ಮಹಿಳಾ ಸಬಲೀಕರಣ ವಿಷಯದ ಕುರಿತು ಮಾತನಾಡಿದರು. ಗ್ರಾಪಂ ಸದಸ್ಯೆ ಶಿವಲೀಲಾ ಮುಳಗುಂದ ಅಧ್ಯಕ್ಷತೆ ವಹಿಸಿದ್ದರು. ಆಸೇಟ್ ಉಪನಿರ್ದೇಶಕ ಶಿವಕುಮಾರ, ಗ್ರಾಪಂ ಉಪಾಧ್ಯಕ್ಷೆ ಸರೋಜಾ ಅಂಗಡಿ, ಒಕ್ಕೂಟದ ಅಧ್ಯಕ್ಷೆ ಮಂಜುಳಾ ರೋಣದ, ವಲಯ ಮೇಲ್ವಿಚಾರಕ ಶಿವರಾಜ, ಗಂಗಮ್ಮ, ಸೇವಾ ಪ್ರತಿನಿಧಿ ಮಹಾದೇವ ಸೇರಿದಂತೆ ಮುಂತಾದವರು ಇದ್ದರು.